ನವದೆಹಲಿ: ಕರ್ತವ್ಯದ ವೇಳೆ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸಮಗ್ರ ಆರೋಗ್ಯ ರಕ್ಷಣೆ ಒದಗಿಸಲು ಕೇಂದ್ರೀಯ ಮೀಸಲು ಅರೆಸೇನಾಪಡೆ (ಸಿಆರ್ಪಿಎಫ್) ನಿರ್ಧರಿಸಿದೆ.
ದೇಶದ ಅತಿದೊಡ್ಡ ಅರೆಸೇನಾಪಡೆಯ 2,200 ಯೋಧರು ಈವರೆಗೆ ಹುತಾತ್ಮರಾಗಿದ್ದು, ಅವರ ಎಲ್ಲ ಕುಟುಂಬ ಸದಸ್ಯರ ಆರೋಗ್ಯ ವಿಮೆ ಪ್ರೀಮಿಯಂ ಅನ್ನು ಪಾವತಿಸಲಿದೆ. 81ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ‘ಯೋಧರು ನಮ್ಮ ಹೆಮ್ಮೆ, ಅವರ ಶೌರ್ಯವನ್ನು ಸಂಭ್ರಮಿಸೋಣ’ ಎನ್ನುವ ಆಶಯದ ಅಡಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ.
‘ದೇಶಕ್ಕಾಗಿ ತಮ್ಮ ಅಮೂಲ್ಯ ಜೀವನ ತ್ಯಾಗ ಮಾಡಿದ ಯೋಧರ ಕುಟುಂಬ ಸದಸ್ಯರಿಗೆ ಸಮಗ್ರ ಆರೋಗ್ಯ ರಕ್ಷೆ ನೀಡುವ ಮೂಲಕ ಆ ಕೊರತೆಯನ್ನು ನೀಗಿಸುವುದು ಯೋಜನೆಯ ಉದ್ದೇಶ. ಕಲ್ಯಾಣ ನಿಧಿಯಿಂದ ವಿಮೆ ಕಂತು ಪಾವತಿಸಲಾಗುವುದು’ ಎಂದು ಸಿಆರ್ಪಿಎಫ್ ಡಿಜಿ ಎ.ಪಿ. ಮಹೇಶ್ವರಿ ತಿಳಿಸಿದ್ದಾರೆ.
ಸರ್ಕಾರದ ಆರೋಗ್ಯ ಸೇವೆಯ ಲಾಭ ಪಡೆಯಲು ಮೃತ ಯೋಧನ ಕುಟುಂಬ ಸದಸ್ಯರು ಸ್ವತಃ ಪ್ರೀಮಿಯಂ ಪಾವತಿಸಬೇಕಿತ್ತು. ಇನ್ನು ಮುಂದೆ ಸಿಆರ್ಪಿಎಫ್ ಪಾವತಿಸಲಿದೆ.
ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾದ40 ಯೋಧರ ಕುಟುಂಬಗಳ ಪರವಾಗಿ ಪೂರ್ಣ ಪ್ರೀಮಿಯಂ ಪಾವತಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದನ್ನು ಹುತಾತ್ಮರಾದ ಎಲ್ಲ ಯೋಧರ ಕುಟುಂಬಗಳಿಗೆ ವಿಸ್ತರಿಸಲು ನಿರ್ಧರಿಸಲಾಯಿತು. ಯೋಧರ ಕುಟುಂಬಗಳಿಗೆ ಆರೋಗ್ಯ ಕಾರ್ಡ್ ವಿತರಣೆಯಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.