ADVERTISEMENT

ಮೊರ್ಬಿ ದುರಂತ: ಇಂತಹ ನಿರ್ಲಕ್ಷ್ಯವೂ ಭಗವಂತನ ಆಟವೇ? ಖರ್ಗೆ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2022, 10:25 IST
Last Updated 3 ನವೆಂಬರ್ 2022, 10:25 IST
ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ   

ಬೆಂಗಳೂರು: ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ ಮುರಿದು ಬಿದ್ದು 130ಕ್ಕೂ ಹೆಚ್ಚು ಮಂದಿ ಮೃತಪಟ್ಟ ದುರುಂತಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ನಿರ್ಲಕ್ಷ್ಯವೂ ಭಗವಂತನ ಆಟವೇ ಎಂದು ಪ್ರಶ್ನಿಸಿದ್ದಾರೆ.

ತೂಗುಸೇತುವೆ ದುರಂತಕ್ಕೆ ನಿರ್ಲಕ್ಷ್ಯದ ಕಾರಣಗಳನ್ನು ಖರ್ಗೆ ಅವರು ಪಟ್ಟಿ ಮಾಡಿ ಟ್ವೀಟ್‌ ಮಾಡಿದ್ದಾರೆ.

1. ತೂಗುಸೇತುವೆಯ ತುಕ್ಕು ಹಿಡಿದ ಕೇಬಲ್‌ಗಳ ದುರಸ್ತಿ ಆಗಿರಲಿಲ್ಲ.

ADVERTISEMENT

2. ಫಿಟ್ನೆಸ್‌ ಪ್ರಮಾಣ ಪತ್ರವಿಲ್ಲದೆ ಮತ್ತು ಅಧಿಕಾರಿಗಳ ಒಪ್ಪಿಗೆ ಪಡೆಯದೆ ಅಕ್ಟೋಬರ್‌ 26ರಂದು ತೂಗುಸೇತುವೆಗೆ ಚಾಲನೆ ನೀಡಲಾಗಿದೆ.

3. ಗುತ್ತಿಗೆದಾರನೂ ಆ ಕೆಲಸ ನಿರ್ವಹಣೆಗೆ ಅಗತ್ಯ ಅರ್ಹತೆಯನ್ನು ಹೊಂದಿರಲಿಲ್ಲ.

4. ದುರಂತ ನಡೆದ ಹಿಂದಿನ ದಿನವಷ್ಟೇ ಈ ತೂಗುಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ ಎಂಬ ವಿಚಾರ ನಗರಸಭೆ ಮುಖ್ಯಸ್ಥನಿಗೆ ತಿಳಿದಿದೆ.

ದುರಂತದಲ್ಲಿ ಸುಮಾರು 130 ಮಂದಿ ಮೃತಪಟ್ಟರೂ ಇದುವರೆಗೆ ಗುತ್ತಿಗೆದಾರರ ಮೇಲಾಗಲಿ ಮತ್ತು ನಗರಸಭೆ ಅಧಿಕಾರಿಗಳ ವಿರುದ್ಧವಾಗಲಿ ಕ್ರಮ ಕೈಗೊಂಡಿಲ್ಲ ಏಕೆ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಕೋಲ್ಕತ್ತ ಸೇತುವೆ ಕುಸಿತದ ಸಂದರ್ಭ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದ ಪ್ರಧಾನಿ ಮೋದಿ, ಇದು ಭಗವಂತನ ಆಟವಲ್ಲ, ಇದು ವಂಚನೆಯ ಆಟ ಎಂಬರ್ಥದಲ್ಲಿ ಹೇಳಿದ್ದರು. ಈ ಹೇಳಿಕೆಯನ್ನು ಉಲ್ಲೇಖಿಸದೆ, ಇಂತಹ ನಿರ್ಲಕ್ಷ್ಯವೂ ಭಗವಂತನ ಆಟವೇ? ಎಂದು ಖರ್ಗೆ ಟೀಕಿಸಿದ್ದಾರೆ.

ಘಟನೆ ಕುರಿತಾಗಿ ಯಾವುದೇ ಸಡಿಲಿಕೆಯನ್ನು ತೋರದೆ ತನಿಖೆ ನಡೆಸುವ ಮೂಲಕ ಪ್ರಧಾನಿ ಅವರು ಗುಜರಾತ್‌ ಸರ್ಕಾರವನ್ನು ಮೇಲೆತ್ತಬೇಕು ಎಂದು ಖರ್ಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.