ADVERTISEMENT

ಮಧ್ಯಪ್ರದೇಶದಲ್ಲಿ ಕಲ್ಲು ತೂರಾಟ ಉತ್ಸವ: ವೈದ್ಯರ ತಂಡ ನಿಯೋಜಿಸಿದ ಅಧಿಕಾರಿಗಳು

ಪಿಟಿಐ
Published 27 ಆಗಸ್ಟ್ 2022, 10:40 IST
Last Updated 27 ಆಗಸ್ಟ್ 2022, 10:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಛಿಂದ್ವಾರಾ: ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಶನಿವಾರ ಪ್ರಾರಂಭವಾದ 'ಗೋಟ್‌ಮರ್' (ಕಲ್ಲು ತೂರಾಟ) ಉತ್ಸವಕ್ಕೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ತಂಡವನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಛಿಂದ್ವಾರಾದ ಪಾಂಡುರ್ನದಲ್ಲಿ ನಡೆಯುವ ಈ ಸಾಂಪ್ರದಾಯಿಕ ವಾರ್ಷಿಕ ಕಾರ್ಯಕ್ರಮದಲ್ಲಿ ಈ ಹಿಂದೆ ಹಲವರು ಪ್ರಾಣ ಕಳೆದುಕೊಂಡಿದ್ದರು. ಹಲವಾರು ಮಂದಿ ಗಾಯಗೊಂಡಿದ್ದ ಘಟನೆಗಳು ನಡೆದಿವೆ.

ಉತ್ಸವಕ್ಕಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಐದಕ್ಕೂ ಹೆಚ್ಚು ವೈದ್ಯರ ತಂಡವನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಎಸ್ಪಿ) ಸಂಜೀವ್ ಉಯಿಕೆ ಹೇಳಿದ್ದಾರೆ.

ADVERTISEMENT

ಪಾಂಡುರ್ನದಲ್ಲಿ ನಡೆಯುತ್ತಿರುವ ಉತ್ಸವಕ್ಕೆ ಡ್ರೋನ್‌ಗಳನ್ನು ಬಳಸಲಾಗಿದೆ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು. ಅಲ್ಲದೇ, ಉತ್ಸವ ನಡೆಯುವ ಪ್ರದೇಶದಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ವಿಧಿಸಲಾಗಿದೆ.

ಗೋಟ್‌ಮಾರ್‌ ಹಬ್ಬದ ಸಮಯದಲ್ಲಿ, ಸಾವರಗಾಂವ್ ಮತ್ತು ಪಾಂಡುರ್ನ ಗ್ರಾಮಗಳ ಜನರು ಜಾಮ್ ನದಿಯ ಎರಡೂ ಬದಿಗಳಲ್ಲಿ ಜಮಾಯಿಸುತ್ತಾರೆ. ನದಿಯ ಮಧ್ಯದಲ್ಲಿರುವ ನಿರ್ಜೀವ ಮರದ ಮೇಲೆ ಹಾರಿಸಲಾಗುವ ಧ್ವಜವನ್ನು ಕಸಿಯಲು ಎರಡೂ ಗ್ರಾಮಗಳ ನಡುವೆ ಸ್ಪರ್ಧೆ ನಡೆಯುತ್ತದೆ. ಆಗ ಕಲ್ಲು ತೂರಾಟ ನಡೆಸಲಾಗುತ್ತದೆ.

ಸುಮಾರು 300 ವರ್ಷಗಳ ಹಿಂದೆ ಪಾಂಡುರ್ನದ ಯುವಕನೊಬ್ಬ ಸಾವರಗಾಂವ್‌ನಿಂದ ಯುವತಿಯೊಬ್ಬಳನ್ನು ಅಪಹರಿಸಿ, ಆಕೆಯೊಂದಿಗೆ ನದಿಯನ್ನು ದಾಟಲು ಪ್ರಯತ್ನಿಸುತ್ತಾನೆ. ಆಗ ಇಬ್ಬರಿಗೂ ಕಲ್ಲುಗಳ ರಾಶಿ ಅಡ್ಡಿಯಾಗುತ್ತದೆ. ಪಾಂಡುರ್ನ ಗ್ರಾಮಸ್ಥರು ಯುವಕನ ನೆರವಿಗೆ ಧಾವಿಸುತ್ತಾರೆ. ನಂತರ ಯುವಕನು ಯುವತಿಯೊಂದಿಗೆ ಸುರಕ್ಷಿತವಾಗಿ ಊರು ಸೇರುತ್ತಾನೆ. ಇದರ ಕಾರಣವಾಗಿ ಈ ಉತ್ಸವ ನಡೆಯುತ್ತದೆ ಎಂದು ಪ್ರತೀತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.