ADVERTISEMENT

ಉದ್ಯೋಗ ಸೃಷ್ಟಿ ಮೂಲಕ ನಕ್ಸಲ್‌ ಸಮಸ್ಯೆ ನಿವಾರಿಸಲು ಮುಂದಾದ ಮಧ್ಯಪ್ರದೇಶ ಸರ್ಕಾರ

ಪಿಟಿಐ
Published 30 ಆಗಸ್ಟ್ 2021, 6:57 IST
Last Updated 30 ಆಗಸ್ಟ್ 2021, 6:57 IST
ಶಿವರಾಜ್‌ ಸಿಂಗ್ ಚೌಹಾಣ್‌
ಶಿವರಾಜ್‌ ಸಿಂಗ್ ಚೌಹಾಣ್‌   

ಭೋಪಾಲ್: ಯುವಕರು ನಕ್ಸಲ್‌ ಗುಂಪುಗಳಿಗೆ ಸೇರುವುದನ್ನು ತಡೆಗಟ್ಟುವುದಕ್ಕಾಗಿ ಮಧ್ಯಪ್ರದೇಶ ಸರ್ಕಾರವು ನಕ್ಸಲ್ ಪೀಡಿತ ಬಾಲಘಾಟ್‌ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಪೊಲೀಸ್ ಮತ್ತು ಇತರೆ ಇಲಾಖೆಗಳಿಗೆ ನೇಮಕಾತಿಯ ಆಂದೋಲನ ಕೈಗೊಳ್ಳಲು ಯೋಜನೆ ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಭಾನುವಾರ ಬಾಲಘಾಟ್‌ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ನಕ್ಸಲ್‌ ಪೀಡಿತ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸ್ಥಳ ಪರಿಶೀಲನೆ ನಡೆಸಿ, ಕ್ಷೇತ್ರವಾರು ಯೋಜನೆಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ನಕ್ಸಲ್ ಪೀಡಿತ ಅಭಿವೃದ್ಧಿ ಕ್ಷೇತ್ರಗಳಲ್ಲಿ ಅನುಷ್ಠಾನಗೊಳ್ಳುವ ಯೋಜನೆಗಳು ಅಭಿವೃದ್ಧಿ ಚಟುವಟಿಕೆಗಳನ್ನು ತ್ವರಿತಗೊಳಿಸುವ ಜೊತೆಗೆ, ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸುತ್ತವೆ. ಈ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ಅಭಿವೃದ್ಧಿ ಬ್ಲಾಕ್‌ಗಳ ಅಡಿ ಬರುವ ಗ್ರಾಮಗಳಲ್ಲಿ ರಸ್ತೆ ಸಂಪರ್ಕ, ನೀರಾವರಿ ಮತ್ತು ಉದ್ಯೋಗ ನೀಡುವಂತಹ ಯೋಜನೆಗಳ ಬಗ್ಗೆ ಹೆಚ್ಚು ಗಮನ ನೀಡಬೇಕು. ಆದ್ಯತೆ ಮೇರೆಗೆ ಅರ್ಹರಿಗೆ ಅರಣ್ಯ ಭೂಮಿ ಹಕ್ಕುಗಳನ್ನು ನೀಡಬೇಕು‘ ಎಂದು ಹೇಳಿದರು.

ADVERTISEMENT

ಈ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗೆ ಕಡಿವಾಣ ಹಾಕಿದ ಪೊಲೀಸ್ ಅಧಿಕಾರಿಗಳನ್ನು ಶ್ಲಾಘಿಸಿದ ಚೌಹಾಣ್ ಅವರು, ಜಿಲ್ಲೆಯ ಪೊಲೀಸ್ ಮತ್ತು ಇತರ ಇಲಾಖೆಗಳಲ್ಲಿ ಯುವಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು. ‘ನಕ್ಸಲರ ವಿರುದ್ಧ ಹೋರಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ಬಡ್ತಿ ನೀಡಲಾಗುವುದು‘ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಇತ್ತೀಚೆಗೆ ನಡೆದ ಹೂಡಿಕೆದಾರರ ಸಭೆಯಲ್ಲಿ ₹4,500 ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವವನ್ನು ಸ್ವೀಕರಿಸಲಾಗಿದೆ. ಈ ಹೂಡಿಕೆಯು ಈ ಪ್ರದೇಶದಲ್ಲಿ 10,000 ಜನರಿಗೆ ಉದ್ಯೋಗ ನೀಡುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.