ADVERTISEMENT

ಮಣಿಪುರ ವಿ.ವಿ. ಬಿಕ್ಕಟ್ಟು: ಪ್ರತಿಭಟನೆ ಕೈಬಿಡಲು ಉಪಮುಖ್ಯಮಂತ್ರಿ ಮನವಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2018, 18:09 IST
Last Updated 5 ಆಗಸ್ಟ್ 2018, 18:09 IST

ಇಂಫಾಲ(ಪಿಟಿಐ): ಮಣಿಪುರ ವಿಶ್ವವಿದ್ಯಾಲಯದಲ್ಲಿ ಎರಡು ತಿಂಗಳುಗಳಿಂದ ತಲೆದೋರಿರುವ ಬಿಕ್ಕಟ್ಟು ಶಮನಕ್ಕೆ ಸಹಕರಿಸಬೇಕು ಎಂದು ಉಪಮುಖ್ಯಮಂತ್ರಿ ವೈ. ಜೋಯ್‌ಕುಮಾರ್‌ ಭಾನುವಾರ ಪ್ರತಿಭಟನಾನಿರತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಮನವಿ ಮಾಡಿದ್ದಾರೆ.

‘ಪ್ರತಿಭಟನೆಯ ಪರಿಣಾಮ ವಿ.ವಿ.ಯ ಶೈಕ್ಷಣಿಕ ಚಟುವಟಿಕೆಗಳು ಮೊಟಕುಗೊಂಡಿವೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಳವಳಪಡುವಂತಾಗಿದೆ. ಇದರಿಂದ ಪ್ರತಿಭಟನೆ ಕೈಬಿಡಬೇಕು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ವಿ.ವಿ.ಯ ಅನುದಾನ ದುರುಪಯೋಗ ಸೇರಿದಂತೆ ವಿವಿಧ ಆರೋಪಗಳಿಗೆ ಗುರಿಯಾಗಿರುವ ಕುಲಪತಿ ಎ.ಪಿ. ಪಾಂಡೆ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಮೇ 30ರಿಂದ ಮಣಿಪುರ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಂಘ ಹಾಗೂ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ADVERTISEMENT

ತನಿಖೆ ನಡೆಯುತ್ತಿರುವ ಕಾರಣ ಕುಲಪತಿಯನ್ನು ಒಂದು ತಿಂಗಳ ರಜೆಯಲ್ಲಿ ಕಳುಹಿಸಲಾಗುವುದು ಎಂದೂ ಉಪಮುಖ್ಯಮಂತ್ರಿ ಹೇಳಿದ್ದಾರೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸೂಚನೆಯ ಮೇರೆಗೆ ಕುಲಪತಿ ಎ.ಪಿ. ಪಾಂಡೆ ಅವರು ಈಚೆಗೆ ಕಾಲೇಜುಗಳಿಗೆ ಒಂದು ತಿಂಗಳ ರಜೆ ಘೋಷಿಸಿದ್ದರು. ಪಾಂಡೆ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯನ್ನು ಕಳೆದ ತಿಂಗಳು ಸಚಿವಾಲಯ ರಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.