
ಗೋರಖ್ಪುರ: ಭಾರತದಲ್ಲಿ ಮತ್ತೊಮ್ಮೆ ಮುಹಮ್ಮದ್ ಅಲಿ ಜಿನ್ನಾ ಅಂತವರು ಹುಟ್ಟದಿರುವಂತೆ ಜನರು ನೋಡಿಕೊಳ್ಳಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸೋಮವಾರ ಹೇಳಿದ್ದಾರೆ.
ಗೋರಖ್ಪುರದಲ್ಲಿ ನಡೆದ ಏಕತಾ ಯಾತ್ರೆಯಲ್ಲಿ ಅವರು ಮಾತನಾಡಿದ್ದಾರೆ.
ರಾಷ್ಟ್ರಗಾನ ವಂದೇ ಮಾತರಂ ಅನ್ನು ವಿರೋಧಿಸುವವರು ಭಾರತದ ಏಕತೆ ಮತ್ತು ಐಕ್ಯತೆಗೆ ಅಪಮಾನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇವತ್ತಿಗೂ ನಾವು ಭಾರತದಲ್ಲಿ ವಾಸಿಸುವವರು ದೇಶಕ್ಕೆ ನಿಷ್ಠರಾಗಿರಬೇಕು ಎಂದು ಆಶಿಸುತ್ತೇವೆ. ಎಲ್ಲರೂ ದೇಶದ ಏಕತೆಯನ್ನು ಕಾಪಾಡಬೇಕು ಎಂದು ಬಯಸುತ್ತೇವೆ ಎಂದು ತಿಳಿಸಿದ್ದಾರೆ.
ಜಾತಿ, ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಎಲ್ಲವನ್ನೂ ನಾವು ವಿರೋಧಿಸಬೇಕು, ಅದು ನಮ್ಮ ಕರ್ತವ್ಯ. ಈ ರೀತಿಯ ಬೇರ್ಪಡಿಸುವಿಕೆಯು ಮತ್ತೊಬ್ಬ ಜಿನ್ನಾ ಅಂತವರನ್ನು ಹುಟ್ಟುಹಾಕುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ.
ದೇಶ ವಿರೋಧಿ ಚಟುವಟಿಕೆಗಳನ್ನು ಬುಡದಲ್ಲೇ ಕಿತ್ತುಹಾಕಬೇಕು. ಈ ವಿಷಯದಲ್ಲಿ ದೇಶದ ಜನರೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದ್ದಾರೆ.
ಮುಹಮ್ಮದ್ ಅಲಿ ಜಿನ್ನಾ ಅವರು ಅಖಿಲ ಭಾರತ ಮುಸ್ಲಿಂ ಲೀಗ್ ನಾಯಕರಾಗಿದ್ದರು. ಭಾರತ ವಿಭಜನೆಯಾಗಿ ಪಾಕಿಸ್ತಾನ ದೇಶ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.