ನವದೆಹಲಿ: ತ್ರಿವಳಿ ತಲಾಖ್ ವಿರುದ್ಧ ಕಾನೂನು ರೂಪಿಸಿರುವುದು ಮುಸ್ಲಿಂ ಮಹಿಳೆಯರ ಆತ್ಮವಿಶ್ವಾಸ ವೃದ್ಧಿಸುವುದರ ಜತೆಗೆ ಸ್ವಾವಲಂಬನೆಯನ್ನೂ ಬಲಪಡಿಸಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದರು.
‘ಮುಸ್ಲಿಂ ಮಹಿಳಾ ಕಾಯ್ದೆ, 2019ರ (ಮದುವೆ ಹಕ್ಕುಗಳ ರಕ್ಷಣೆ)’ ಮೊದಲ ವರ್ಷಾಚರಣೆ ಹಿನ್ನೆಲೆಯಲ್ಲಿ ದೇಶದ ಮುಸ್ಲಿಂ ಮಹಿಳೆಯರನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು. ಈ ವೇಳೆ ಅವರು, ‘ವೋಟ್ ಬ್ಯಾಂಕ್ ವ್ಯಾಪಾರಿಗಳು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದ ತ್ರಿವಳಿ ತಲಾಖ್ ಅನ್ನು ಮೋದಿ ಸರ್ಕಾರ ಕ್ರಿಮಿನಲ್ ಅಪರಾಧವನ್ನಾಗಿಸಿದೆ’ ಎಂದು ಹೇಳಿದರು.
ಮೋದಿ ಸರ್ಕಾರವು ರಾಜಕೀಯ ಸಬಲೀಕರಣಕ್ಕೆ ಬದ್ಧವಾಗಿದೆಯೇ ವಿನಃ ರಾಜಕೀಯ ಶೋಷಣೆಗಲ್ಲ ಎಂದೂ ಅವರು ಹೇಳಿದರು.
ಆಗಸ್ಟ್ 1 ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಎಂಬ ಸಾಮಾಜಿಕ ಅನಿಷ್ಟದಿಂದ ಬಿಡುಗಡೆಯಾದ ದಿನ. ದೇಶದ ಇತಿಹಾಸದಲ್ಲೇ ಈ ದಿನ ‘ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನ’ವೆಂದು ಪರಿಗಣಿತವಾಗಿದೆ ಎಂದೂ ಅವರು ಹೇಳಿದರು.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ ಸಹ ಮುಸ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.