ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜ್ಪೂತ್ ಅವರ ಮಾಜಿ ವ್ಯವಸ್ಥಾಪಕಿ ದಿಶಾ ಸಾಲಿಯಾನ್ ಸಾವಿನ ಕುರಿತು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ರಾಜಕಾರಣಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಕೆಯ ಪೋಷಕರು ಮಹಾರಾಷ್ಟ್ರ ಮಹಿಳಾ ಆಯೋಗವನ್ನು ಬುಧವಾರ ಆಗ್ರಹಿಸಿದ್ದಾರೆ.
ದಿಶಾ ಪೋಷಕರಾದ ವಸಂತಿ ಮತ್ತು ಸತೀಶ್ ಸಾಲಿಯಾನ್ ಅವರು ಆಯೋಗದ ಮುಖ್ಯಸ್ಥರಾದ ರೂಪಾಲಿ ಚಕಣಕರ್ ಅವರನ್ನು ಭೇಟಿಯಾಗಿ, ತೀರಿಹೋದ ನಮ್ಮ ಮಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟ ಆಗುತ್ತಿರುವಅವಹೇಳನಕಾರಿ ಸುಳ್ಳು ಸುದ್ದಿಗಳಿಂದ ನಾವು ಸಮಾಜದಲ್ಲಿ ತಲೆ ಎತ್ತಿ ಬದುಕಲು ಸಾಧ್ಯವಾಗುತ್ತಿಲ್ಲ. ಯಾತನೆ ಅನುಭವಿಸುತ್ತಿದ್ದೇವೆ. ಇದಕ್ಕೆ ಕಾರಣರಾದ ಕೇಂದ್ರ ಸಚಿವ ನಾರಾಯಣ ರಾಣೆ ಮತ್ತು ಆತನ ಪುತ್ರ ನಿತೀಶ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ತಮ್ಮ ಮಗಳ ಸಾವಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಬೇಡಿ ಎಂಬ ಪೋಷಕರ ಭಾವನಾತ್ಮಕ ಮನವಿಯ ನಡುವೆಯೂ ನಾರಾಯಣ ರಾಣೆ, ದಿಶಾಅತ್ಯಾಚಾರ ಮತ್ತು ಕೊಲೆಯಿಂದಸಾವಿಗೀಡಾಗಿದ್ದಾಳೆ ಎಂದು ಹೇಳಿಕೆ ನೀಡಿದ್ದರು. ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್, ದಿಶಾ ಸಾವಿನ ರಹಸ್ಯ ಮಾರ್ಚ್ 7ರ ಬಳಿಕ ಬಯಲಾಗಲಿದೆ ಎಂದಿದ್ದರು. ಈ ಬಗ್ಗೆ ಮಹಿಳಾ ಆಯೋಗವು ಮುಂಬೈ ಪೊಲೀಸರಿಗೆ ನೋಟಿಸ್ ನೀಡಿತ್ತು.
2020ರ ಜೂನ್ ತಿಂಗಳಲ್ಲಿ ಸುಶಾಂತ್ ಸಿಂಗ್ ರಜ್ಪೂತ್ ಆತ್ಮಹತ್ಯೆ ಮಾಡಿಕೊಳ್ಳುವ ಆರು ದಿನ ಮೊದಲು ದಿಶಾ ಸಾಲಿಯಾನ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.