ADVERTISEMENT

ಆ ₹2.4 ಕೋಟಿ: ಮುಂಬೈನ 17 ವಿದ್ಯಾರ್ಥಿಗಳ ಒತ್ತೆಯಾಳು ಪ್ರಕರಣಕ್ಕೆ ಟ್ವಿಸ್ಟ್

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 11:18 IST
Last Updated 31 ಅಕ್ಟೋಬರ್ 2025, 11:18 IST
   

ಮುಂಬೈ: ಗುರುವಾರ ಮುಂಬೈನಲ್ಲಿ ಚಿತ್ರ ನಿರ್ಮಾಪಕ ರೋಹಿತ್ ಆರ್ಯ ಎಂಬುವವರು 17 ಮಕ್ಕಳು ಸೇರಿದಂತೆ 19 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಪ್ರಕರಣದಲ್ಲಿ ಒಂದೊಂದೇ ಸಂಗತಿ ಹೊರಬೀಳುತ್ತಿದೆ. ತಮ್ಮ ಕಂಪನಿ ಅಪ್ಸರಾ ಮೀಡಿಯಾ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ನೇತೃತ್ವದ ನಡೆದ ನಗರ ನೈರ್ಮಲ್ಯ ಮತ್ತು ಸ್ವಚ್ಛತಾ ಅಭಿಯಾನಕ್ಕಾಗಿ ಸರ್ಕಾರದಿಂದ ₹2.4 ಕೋಟಿ ಬಾಕಿ ಇದ್ದು, ಅದರ ಬಿಡುಗಡೆಗೆ ಸರ್ಕಾರದ ಬಳಿ ಬೇಡಿಕೆ ಇಟ್ಟಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಒತ್ತೆಯಾಳು ಬಿಕ್ಕಟ್ಟಿನ ನಡುವೆ ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ಆರ್ಯ, ಕೆಲವರಿಂದ ಸರಳ ಮತ್ತು ನೈತಿಕ ಬೇಡಿಕೆಗಳಿಗೆ ಉತ್ತರಗಳನ್ನು ಬಯಸುತ್ತಿರುವುದಾಗಿ ಹೇಳಿದ್ದರು. ರೋಹಿತ್ ಮನವೊಲಿಕೆ ಯತ್ನ ವಿಫಲವಾದ ಬಳಿಕ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ಆರ್ಯನನ್ನು ಗುಂಡಿಕ್ಕಿ ಕೊಂದಿದ್ದರು.

ADVERTISEMENT

ಚಲನಚಿತ್ರ ನಿರ್ಮಾಪಕ ರೋಹಿತ್ ಆರ್ಯ ಮತ್ತು ಅವರ ಅಪ್ಸರಾ ಮೀಡಿಯಾವನ್ನು 2022 ಮತ್ತು 2023ನೇ ಸಾಲಿನಲ್ಲಿ ಪ್ರಾಜೆಕ್ಟ್ ಲೆಟ್ಸ್ ಚೇಂಜ್ ಎಂಬ ನಗರ ನೈರ್ಮಲ್ಯ ಅಭಿಯಾನವನ್ನು ಮುನ್ನಡೆಸಲು ಆಯ್ಕೆ ಮಾಡಲಾಗಿತ್ತು ಎಂದು ಶಿಕ್ಷಣ ಇಲಾಖೆಯು ದೃಢಪಡಿಸಿದೆ.

ಈ ಉಪಕ್ರಮದಲ್ಲಿ 59 ಲಕ್ಷ ವಿದ್ಯಾರ್ಥಿಗಳನ್ನು 'ಸ್ವಚ್ಛತಾ ಮೇಲ್ವಿಚಾರಕರು' ಎಂದು ನಿಯೋಜಿಸಲಾಗಿತ್ತು.

ನಂತರ 2023ರ ಜೂನ್ 30ರಂದು ಸರ್ಕಾರಿ ಆದೇಶದ ಮೂಲಕ ₹9.9 ಲಕ್ಷ ಬಿಡುಗಡೆ ಮಾಡಲಾಗಿತ್ತು. 'ಸ್ವಚ್ಛತಾ ಮಾನಿಟರ್' ಗಾಗಿ ₹2 ಕೋಟಿ ಒಳಗೊಂಡಂತೆ ₹20.63 ಕೋಟಿಯನ್ನು ಈ ಯೋಜನೆಗೆ ಸರ್ಲಶರ ಮೀಸಲಿಟ್ಟಿತ್ತು.ಆದರೆ, ಈ ಉದ್ದೇಶಕ್ಕಾಗಿ ಆರ್ಯ ಸಲ್ಲಿಸಿದ್ದ ಯೋಜನೆಯ ದಸ್ತಾವೇಜು ಅಪೂರ್ಣವಾಗಿತ್ತು ಎಂದು ಶಿಕ್ಷಣ ಇಲಾಖೆ ಗುರುವಾರ ರಾತ್ರಿ ತಿಳಿಸಿದೆ. ಇದರಲ್ಲಿ ಆರ್ಯ ಅವರ 'ಲೆಟ್ಸ್ ಚೇಂಜ್' ಸಾಕ್ಷ್ಯಚಿತ್ರದ ಜಾಹೀರಾತು, ಮಾನವಶಕ್ತಿ, ತಾಂತ್ರಿಕ ಬೆಂಬಲ ಮತ್ತು ಪ್ರದರ್ಶನಕ್ಕಾಗಿ ಹೆಚ್ಚಿನ ವೆಚ್ಚಗಳು ಸೇರಿದ್ದವು.

‘ಈ ತಾಂತ್ರಿಕ ಕಾರಣದಿಂದ ಯೋಜನೆ ಅನುಷ್ಠಾನ ಆಗಿರಲಿಲ್ಲ’ ಎಂದು ಅದು ತಿಳಿಸಿದೆ.

ವರ್ಷದ ಬಳಿಕ ಯೋಜನೆ ಪುನರರಂಭಿಸಲು ಆರ್ಯ ಬೇಡಿಕೆ ಇಟ್ಟಿದ್ದರು. ಈ ಬಾರಿ ರಾಜ್ಯದ ಎಲ್ಲ ಶಾಲೆಗಳಲ್ಲೂ ಯೋಜನೆ ಜಾರಿ ಮಾಡಬೇಕೆಂದು ಒತ್ತಾಯಿಸಿದ್ದ ಅವರು, ₹2.42 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ವರದಿ ತಿಳಿಸಿದೆ.

ಈ ನಡುವೆ, ಲೆಟ್ಸ್ ಚೇಂಜ್‌ನ ಪ್ರಾಜೆಕ್ಟ್ ನಿರ್ದೇಶಕರಾಗಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುವ ಶಾಲೆಗಳಿಂದ 'ನೋಂದಣಿ ಶುಲ್ಕವನ್ನು ಆರ್ಯ ಸಂಗ್ರಹಿಸುತ್ತಿದ್ದರು. ಆದರೆ, ಆರ್ಯ ಅವರಿಗೆ ಶುಲ್ಕ ಸಂಗ್ರಹಕ್ಕೆ ಅಧಿಕಾರವಿರಲಿಲ್ಲ ಎಂದು ಸರ್ಕಾರ ಹೇಳಿದೆ.

‘ಟೆಂಡರ್‌, ನಿಯಮಗಳು ಮತ್ತು ಷರತ್ತುಗಳು, ಇತ್ಯಾದಿ ಪ್ರಕ್ರಿಯೆಗಳ ಮೂಲಕ ಸರ್ಕಾರಿ ಯೋಜನೆ ನಡೆಯಬೇಕಿದೆ. ಆದರೆ, ಈ ಪ್ರಕರಣದಲ್ಲಿ ಅಂತಹ ಯಾವುದೇ ಕಾರ್ಯವಿಧಾನಗಳನ್ನು ಜಾರಿಗೆ ತಂದಿಲ್ಲ . ಖಾಸಗಿ ಸಂಸ್ಥೆಯು ಶಾಲೆಗಳಿಂದ ಹಣವನ್ನು ಸಂಗ್ರಹಿಸಿದೆ. ಸರ್ಕಾರಿ ನಿಯಮಗಳ ಪ್ರಕಾರ ಅದನ್ನು ಅನುಮತಿಸಲಾಗುವುದಿಲ್ಲ’ಎಂದು ರಾಜ್ಯದ ಶಿಕ್ಷಣ ಸಚಿವ ದಾದಾಜಿ ಭೂಸೆ ಗುರುವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದ್ದರು.

ಶಿಕ್ಷಣ ಇಲಾಖೆಯೂ ಇದೇ ರೀತಿಯ ಸ್ಪಷ್ಟೀಕರಣವನ್ನು ನೀಡಿದೆ.

PM Modi fulfilled Sardar Patel's dream of truly unified India by abrogating Article 370: Amit Shah

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.