ADVERTISEMENT

ಮುಂಬೈ: ಕೋವಿಡ್ ಸಾವು ಹೆಚ್ಚಳ, ಸ್ಮಶಾನಗಳಲ್ಲಿ 24 ಗಂಟೆ ಗುಂಡಿ ತೋಡುವ ಕೆಲಸ 

ರಾಯಿಟರ್ಸ್
Published 29 ಏಪ್ರಿಲ್ 2021, 10:01 IST
Last Updated 29 ಏಪ್ರಿಲ್ 2021, 10:01 IST
   

ಮುಂಬೈ: ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ಭೀಕರ ಪರಿಸ್ಥಿತಿ ಯಾವ ಹಂತದಲ್ಲಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ಮುಂಬೈನಲ್ಲಿ ಸ್ಮಶಾನಕ್ಕೆ ಬರುತ್ತಿರುವ ನೂರಾರು ಶವಗಳಿಗೆ ಗುಂಡಿ ತೋಡಲು 24 ಗಂಟೆ ಗುಂಡಿ ತೋಡುವವರು ಕೆಲಸ ಮಾಡುತ್ತಿದ್ದಾರೆ.

ಈ ಮಧ್ಯೆ, ಗುಂಡಿ ತೋಡುವ ಕೆಲಸದಲ್ಲಿ ನಿತ್ಯ ತೊಡಗಿರುವ ಸಯ್ಯೆದ್ ಮುನೀರ್ ಕಮ್ರುದ್ದೀನ್ ಎಂಬ ಕಾರ್ಮಿಕ ಕೆಲಸದ ಒತ್ತಡದಲ್ಲಿ ವೈಯಕ್ತಿಕ ರಕ್ಷಣಾ ಕಿಟ್ ಮತ್ತು ಗ್ಲೌಸ್‌ಗಳನ್ನು ಬಿಟ್ಟು ಗುಂಡಿ ತೆಗೆಯುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.

‘ನಾನು ಕೋವಿಡ್‌ಗೆ ಹೆದರುವುದಿಲ್ಲ, ನಾನು ಧೈರ್ಯದಿಂದ ಕೆಲಸ ಮಾಡಿದ್ದೇನೆ. ಇದು ಧೈರ್ಯದ ವಿಷಯ, ಭಯದ್ದಲ್ಲ’ ಎಂದು 25 ವರ್ಷಗಳಿಂದ ನಗರದಸ್ಮಶಾನದಲ್ಲಿ ಗುಂಡಿ ತೆಗೆಯುತ್ತಿರುವ 52 ವರ್ಷದ ಸಯ್ಯೆದ್ ಹೇಳುತ್ತಾರೆ.

ADVERTISEMENT

ನಾನು ಮತ್ತು ನನ್ನ ಸಹಚರರು 24 ಗಂಟೆ ಕೋವಿಡ್ ರೋಗಿಗಳ ಅಂತ್ಯಸಂಸ್ಕಾರದ ಕೆಲಸದಲ್ಲಿ ತೊಡಗಿದ್ದೇವೆ ಎಂದು ಕಮ್ರುದ್ದೀನ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

‘ಇದು ನಮ್ಮ ಏಕೈಕ ಕೆಲಸ. ಮೃತದೇಹವನ್ನು ಆಂಬುಲೆನ್ಸ್‌ನಿಂದ ತೆಗೆಯುವುದು, ನಂತರ ಅದನ್ನು ಸಮಾಧಿ ಮಾಡುವುದು’ ಎಂದು ಅವರು ಹೇಳಿದರು, ಒಂದು ವರ್ಷದಿಂದ ನಾವು ರಜೆ ಪಡೆದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ರಂಜಾನ್ ತಿಂಗಳಾದರೂ ಮೃತದೇಹಗಳ ಸಂಸ್ಕಾರದ ಕೆಲಸದಲ್ಲಿ ತೊಡಗಿಸಿಕೊಂಡಿರುವುದರಿಂದ ಉಪವಾಸ ಮಾಡಲಾಗುತ್ತಿಲ್ಲ.

‘ನಮ್ಮ ಕೆಲಸ ತುಂಬಾ ಕಠಿಣ. ಗುಂಡಿ ತೋಡಬೇಕು. ಶವಗಳನ್ನು ತಂದು ಮಣ್ಣು ಮಾಡಬೇಕು. ಈ ಸಮಯ ಬಾಯಾರಿಕೆ ಆಗೇ ಆಗುತ್ತದೆ. ಹೀಗಿರುವಾಗ, ಉಪವಾಸ ಮಾಡಲು ಹೇಗೆ ಸಾಧ್ಯ?’ ಎಂದು ಕಮ್ರುದ್ದೀನ್ ಹೇಳಿದ್ದಾರೆ.

ಒಟ್ಟಿನಲ್ಲಿ ಕೋವಿಡ್‌ನಿಂದ ಜನರ ಸಾವಿನ ಸಂಖ್ಯೆ ಎಷ್ಟರಮಟ್ಟಿಗೆ ಹೆಚ್ಚಿದೆ ಎಂದರೆ, ಸ್ಮಶಾನಗಳಲ್ಲಿ ಗುಂಡಿ ತೋಡುವವರಿಗೂ ಬಿಡುವಿಲ್ಲ.

ಕೋವಿಡ್ 2ನೇ ಅಲೆಗೆ ಸಿಲುಕಿರುವ ದೇಶದಲ್ಲಿ ಸದ್ಯ ನಿತ್ಯ3 ಲಕ್ಷಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.