ಮುಂಬೈ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ಸರ್ಕಾರ ಕಠಿಣ ನಿರ್ಬಂಧಗಳನ್ನು ವಿಧಿಸಿದ ನಂತರ ತಮ್ಮ ತಮ್ಮ ಊರುಗಳಿಗೆ ಪ್ರಯಣಿಸುವುದಕ್ಕಾಗಿ ಅಧಿಕ ಮಂದಿ ಬುಧವಾರ ಇಲ್ಲಿನ ಲೋಕಮಾನ್ಯ ತಿಲಕ್ ಟರ್ಮಿನಲ್ (ಎಲ್ಎಲ್ಟಿ) ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ್ದರು.
ಜನಸಂದಣಿ ನಿಯಂತ್ರಿಸಲು ರೈಲ್ವೆ ಸಂರಕ್ಷಣಾ ಪಡೆ ಮತ್ತು ಸರ್ಕಾರಿ ರೈಲ್ವೆ ಪೊಲೀಸರು ಎಲ್ಟಿಟಿ ನಿಲ್ದಾಣದ ಹೊರಗೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದರು. ಇದೇ ವೇಳೆ ಪ್ರಯಾಣಿಕರು ಭಯಭೀತರಾಗದಂತೆ ಕೇಂದ್ರ ರೈಲ್ವೆ ಪೊಲೀಸರು ಮನವಿ ಮಾಡಿದರು.
ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಮುಂದಿನ 15 ದಿನಗಳ ಕಾಲ ರಾಜ್ಯದಾದ್ಯಂತ ಸಾರ್ವಜನಿಕ ಸಂಚಾರದ ಮೇಲೆ ತೀವ್ರ ನಿರ್ಬಂಧಗಳನ್ನು ವಿಧಿಸಿದೆ. ಅಗತ್ಯ ಸೇವೆಗಳನ್ನು ಹೊರತು ಪಡಿಸಿ, ಇನ್ನೆಲ್ಲ ಚಟುವಟಿಕೆಗಳ ಮೇಲೆ ರಾತ್ರಿ 8 ರಿಂದ ಬೆಳಿಗ್ಗೆ 7 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ. ಇದು ಮೇ 1ರವರೆಗೆ ಜಾರಿಯಲ್ಲಿರುತ್ತದೆ. ಈಗಾಗಲೇ ಮಹಾರಾಷ್ಟ್ರದ ಕೆಲವು ನಗರಗಳಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
‘ಈಗ ವಿಶೇಷ ರೈಲುಗಳಲ್ಲಿ ತೆರಳುವ, ಟಿಕೆಟ್ ಖಚಿತವಾಗಿರುವ ಪ್ರಯಾಣಿಕರಿಗಷ್ಟೇ ರೈಲ್ವೆ ನಿಲ್ದಾಣ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಅಂಥ ಪ್ರಯಾಣಿಕರು ರೈಲು ಹೊರಡುವ ಒಂದೂವರೆ ಗಂಟೆ ಮುನ್ನ ನಿಲ್ದಾಣವನ್ನು ತಲುಪುವಂತೆ ಸೂಚಿಸಲಾಗಿದೆ‘ ಎಂದು ಕೇಂದ್ರ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ‘ಸುದ್ದಿ ಸಂಸ್ಥೆ‘ಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.