ಮುಂಬೈ: ಕೋವಿಡ್–19 ಪಿಡುಗು ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಗಣೇಶೋತ್ಸವವನ್ನು ಯಾವ ರೀತಿ ಆಯೋಜನೆ ಮಾಡಬಹುದು ಎಂಬುದನ್ನು ಚರ್ಚಿಸಲು ಪೊಲೀಸ್ ಕಮಿಷನರ್ ಪರಮ್ ವೀರ್ ಸಿಂಗ್ ಅವರು ನಗರದ ಗಣೇಶ ಮಂಡಳಗಳ ಜೊತೆ ಸಭೆ ನಡೆಸಿದರು.
ಮುಂಬೈನಲ್ಲಿ ಸಾವಿರಾರು ಗಣೇಶ ಮಂಡಳಗಳು ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತವೆ. ಈ ಬಾರಿ 10 ದಿನಗಳ ಉತ್ಸವ ಆಗಸ್ಟ್ 22 ರಂದು ಆರಂಭವಾಗಲಿದೆ.
ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಯಿತು. ಮಹಾರಾಷ್ಟ್ರ ಸರ್ಕಾರದ ಎಲ್ಲ ಆದೇಶಗಳನ್ನು ಪಾಲಿಸುವುದಾಗಿ ಮಂಡಳಗಳ ಮುಖ್ಯಸ್ಥರು ಭರವಸೆ ನೀಡಿದರು.
ಸರ್ಕಾರ ಸೂಚನೆ ನೀಡಿದರೆ ಈ ವರ್ಷ ಗಣೇಶೋತ್ಸವವನ್ನು ಆಚರಿಸುವುದಿಲ್ಲ. ಸದ್ಯ ತಲೆದೋರಿರುವ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸ್ವಾಸ್ಥ್ಯ ಮುಖ್ಯ ಎಂದು ಗಣೇಶ ಗಲ್ಲಿ ಮಂಡಳ ಕಾರ್ಯದರ್ಶಿ ಸ್ವಪ್ನಿಲ್ ಪರಬ್ ತಿಳಿಸಿದರು.
ಮುಂದೂಡಿಕೆ: ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಡಾಲಾದಲ್ಲಿ ಜಿಎಸ್ಬಿ ಗಣೇಶೋತ್ಸವ ಸಮಿತಿ ಗಣೇಶ ಉತ್ಸವವನ್ನು ಫೆಬ್ರುವರಿಗೆ ಮುಂದೂಡಿದೆ ಎಂದು ಟ್ರಸ್ಟಿ ಮುಕುಂದ ಕಾಮತ್ ತಿಳಿಸಿದ್ದಾರೆ. ವಡಾಲಾ ಮಠದಲ್ಲಿ 10 ದಿನಗಳ ಕಾಲ ನಡೆಯುವ ಉತ್ಸವಕ್ಕೆ ಸಾವಿರಾರು ಮಂದಿ ದರ್ಶನ ಪಡೆಯುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.