
ಮುಂಬೈ: 16 ವರ್ಷಗಳ ಹಿಂದೆ ನಡೆದಿದ್ದ ಅತ್ಯಾಚಾರ ಕುರಿತಂತೆ ವಾಕ್ ಮತ್ತು ಶ್ರವಣದೋಷವುಳ್ಳ ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ ಕಾಮುಕನೊಬ್ಬನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಹಲವು ಮಹಿಳೆಯರ ಮೇಲೂ ಅತ್ಯಾಚಾರವೆಸಗಿ, ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.
ಅತ್ಯಾಚಾರಕ್ಕೆ ಒಳಗಾದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲೇ ಸಂತ್ರಸ್ತೆಯು ಮೌನ ಮುರಿದು ದೂರು ನೀಡಿದ್ದು, ಡಿಸೆಂಬರ್ 13ರಂದು ಆರೋಪಿಯನ್ನು ಬಂಧಿಸಲಾಗಿದೆ.
‘ಪಶ್ಚಿಮ ಉಪನಗರದ ನಿವಾಸಿಯಾಗಿರುವ ಸಂತ್ರಸ್ತೆಯು ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಜೊತೆ ವಿಡಿಯೊ ಕರೆಯಲ್ಲಿ ಸಂಜ್ಞೆಗಳನ್ನು ಬಳಸಿ ಸಂವಹನ ನಡೆಸುತ್ತಿದ್ದ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಸಿನಲ್ಲಿ ನನ್ನ ಮೇಲಾದ ಅತ್ಯಾಚಾರವನ್ನು ಬಹಿರಂಗಪಡಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪತಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಠಾಣೆ ಜಿಲ್ಲಾ ವಾಕ್–ಶ್ರವಣ ದೋಷವುಳ್ಳವರ ಸಂಘದ ಅಧ್ಯಕ್ಷ ವೈಭವ್ ಘೈಸಿಸ್, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಫರ್ಹಾನ್ ಖಾನ್, ಆಂಗಿಕ ಭಾಷೆ ವ್ಯಾಖ್ಯಾನಕಾರ ಮಧು ಖೇನಿ, ಅಲಿ ಯಾವರ್ ಜಂಗ್ ವಾಕ್ ಹಾಗೂ ಶ್ರವಣ ರಾಷ್ಟ್ರೀಯ ಸಂಸ್ಥೆಯ ನಿವೃತ್ತ ಅಧಿಕಾರಿ ದಿವ್ಯಜ್ಞಾನ್ ಜೊತೆಗೂಡಿ ಇಲ್ಲಿನ ಕುರಾರ್ ಪೊಲೀಸ್ ಠಾಣೆಗೆ ತೆರಳಿ, ಕ್ಯಾಮೆರಾದ ಮುಂದೆ ಸಂತ್ರಸ್ತೆಯು ಹೇಳಿಕೆಯನ್ನು ದಾಖಲಿಸಿದ್ದಾರೆ. ಇದಾದ ಕೆಲವು ಗಂಟೆಗಳಲ್ಲಿಯೇ ಪಾಲ್ಘರ್ ಜಿಲ್ಲೆಯ ವಿರಾರ್ ಪಟ್ಟಣದಲ್ಲಿ ಆರೋಪಿ ಮಹೇಶ್ ಪವಾರ್ನನ್ನು ಪೊಲೀಸರು ಬಂಧಿಸಿದ್ದಾರೆ.
20 ಮಹಿಳೆಯರ ಮೇಲೆ ಅತ್ಯಾಚಾರ: ‘2009ರಲ್ಲಿ ಸ್ನೇಹಿತೆಯ ಜೊತೆ ಸಾಂತಾಕ್ರೂಜ್ನಲ್ಲಿರುವ ವಕೊಲದಲ್ಲಿರುವ ಆರೋಪಿಯ ಮನೆಗೆ ತೆರೆಳಿದ್ದೆ. ಈ ವೇಳೆ ಹುಟ್ಟುಹಬ್ಬದ ನೆಪದಲ್ಲಿ ಸಮೋಸ ಹಾಗೂ ಮತ್ತು ಬರಿಸುವ ಪದಾರ್ಥ ಬೆರೆಸಿದ್ದ ಪಾನೀಯ ನೀಡಿದ್ದರು. ಪ್ರಜ್ಞೆ ತಪ್ಪಿದ ವೇಳೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಎಚ್ಚರವಾದ ವೇಳೆ ಸ್ನೇಹಿತೆಯು ಮನೆಯಲ್ಲಿ ಇರಲಿಲ್ಲ. ಆರೋಪಿಯು ಅತ್ಯಾಚಾರ ಎಸಗಿದ ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡಿದ್ದರು’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಹಲವು ಯುವತಿಯರ ಮೇಲೂ ಅತ್ಯಾಚಾರ ಎಸಗಿ, ವಿಡಿಯೊ ಚಿತ್ರೀಕರಿಸಿ, ಅವರಿಂದ ಅಪಾರ ಹಣ, ಮೊಬೈಲ್, ಚಿನ್ನ ಪಡೆದಿದ್ದ ಎಂದು ತಿಳಿಸಿದ್ದಾರೆ.
‘ಪ್ರಾಥಮಿಕ ತನಿಖೆ ಪ್ರಕಾರ, ಏಳು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವುದು ಕಂಡುಬಂದಿದೆ. ಇದು 20ವರೆಗೂ ಏರಿಕೆಯಾಗುವ ಸಾಧ್ಯತೆಯಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.