ಗುಂಪು ಹಲ್ಲೆ
– ಗೆಟ್ಟಿ ಚಿತ್ರ
ರುದ್ರಪುರ(ಉತ್ತರಾಖಂಡ): ದೇವಾಲಯ ಮುಂಭಾಗದ ಖಾಲಿ ಜಾಗದಲ್ಲಿ ನಮಾಜ್ ಮಾಡಿದ ಕಾರಣಕ್ಕೆ ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಕೆಲವರು ಹಲ್ಲೆ ನಡೆಸಿ, ಧಾರ್ಮಿಕ ಮಂತ್ರಗಳನ್ನು ಪಠಿಸುವಂತೆ ಒತ್ತಾಯಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ ಆರೋಪಿಗಳು ಆ ವ್ಯಕ್ತಿಯನ್ನು ಕೋಲಿನಿಂದ ಹೊಡೆದು ನಿಂದಿಸುತ್ತಿರುವುದು ಕಂಡುಬಂದಿದೆ.
ರೇಷಮ್ ಬಾರಿ ಪ್ರದೇಶದ ನಿವಾಸಿ ಶಾಹಿದ್ ಎಂಬ ವ್ಯಕ್ತಿ ರಂಜಾನ್ ತಿಂಗಳಲ್ಲಿ ಜಗತ್ಪುರದ ಅತ್ರಿಯ ದೇವಸ್ಥಾನದ ಮುಂದೆ ನಮಾಜ್ ಮಾಡುತ್ತಿದ್ದರು. ಶಾಹಿದ್ ಅವರು ಹಲವು ದಿನಗಳಿಂದ ದೇವಸ್ಥಾನದ ಬಳಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ತಾನು ನಮಾಜ್ ಮಾಡಿದ ಜಾಗ ದೇವಸ್ಥಾನದಿಂದ ಸಾಕಷ್ಟು ದೂರದಲ್ಲಿದೆ ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಮುಸ್ಲಿಂ ಸಮುದಾಯದ ಸದಸ್ಯರು, ಶಾಹಿದ್ ಜೊತೆಗೆ ತೆರಳಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಲ್ಲೆ ನಡೆಸಿದವರ ಪೈಕಿ ಒಬ್ಬ ವ್ಯಕ್ತಿ ಕೊಲೆ ಪ್ರಕರಣದ ಅಪರಾಧಿಯಾಗಿದ್ದು, ಪೆರೋಲ್ ಮೇಲೆ ಹೊರಗಿದ್ದಾನೆ.
ದೇವಸ್ಥಾನದ ಜಾಗದಲ್ಲಿ ಬೇರೆ ಯಾವುದೇ ಧರ್ಮದ ಧಾರ್ಮಿಕ ಚಟುವಟಿಕೆ ನಡೆದರೆ ಸಹಿಸಲಾಗುವುದಿಲ್ಲ. ನಮ್ಮ ಮೇಲೆ ದೂರು ದಾಖಲಾದರೂ ಬಿಡಲ್ಲ ಎಂದು ದೇವಸ್ಥಾನದ ವ್ಯವಸ್ಥಾಪಕ ಅರವಿಂದ್ ಶರ್ಮಾ ಹೇಳಿದ್ದಾರೆ.
ಸ್ಥಳಕ್ಕೆ ತೆರಳಿದ್ದ ಪೊಲೀಸರು, ಶಾಂತಿ ಕಾಪಾಡುವಂತೆ ಎರಡೂ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ಶಾಹಿದ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸ್ವೀಕಾರಾರ್ಹವಲ್ಲ ಎಂದು ಪಾಲಿಕೆ ಸದಸ್ಯ ಪಾಲಿಕೆ ಪರ್ವೇಜ್ ಖುರೇಷಿ ಹೇಳಿದ್ದಾರೆ.
ಇದೊಂದು ಅತ್ಯಂತ ಗಂಭೀರ ವಿಷಯವಾಗಿದೆ. ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ಸ್ವೀಕಾರಾರ್ಹವಲ್ಲ. ನಮಾಜ್ ಬಗ್ಗೆ ಯಾರಿಗಾದರೂ ಆಕ್ಷೇಪಣೆ ಇದ್ದರೆ ಆಡಳಿತಕ್ಕೆ ಮಾಹಿತಿ ನೀಡಬೇಕು. ನಿಷ್ಪಕ್ಪಪಾತ ತನಿಖೆಗೆ ಒತ್ತಾಯಿಸಿದ ಅವರು, ಇಂತಹ ಘಟನೆ ಮರುಕಳಿಸದಂತೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕುಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.