ADVERTISEMENT

ಕೊರೊನಾ ಲಾಕ್‌ಡೌನ್ ಉಲ್ಲಂಘಿಸಿದವರನ್ನು ಜೈಲಿಗೆ ಹಾಕಿ: ರಾಜ್ಯಗಳಿಗೆ ಕೇಂದ್ರ ಆದೇಶ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 15:44 IST
Last Updated 2 ಏಪ್ರಿಲ್ 2020, 15:44 IST
ಲಾಕ್‌ಡೌನ್ ವೇಳೆ ರಸ್ತೆಗಿಳಿದ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಿದ ಪೊಲೀಸರು
ಲಾಕ್‌ಡೌನ್ ವೇಳೆ ರಸ್ತೆಗಿಳಿದ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಿದ ಪೊಲೀಸರು    

ನವದೆಹಲಿ: ಕೊರೊನಾ ಸೋಂಕು ತಡೆಯಲು ದೇಶವ್ಯಾಪಿ ಲಾಕ್‌ಡೌನ್ ಮಾಡಿರುವಾಗ ಈ ನಿಯಮವನ್ನು ಉಲ್ಲಂಘಿಸಿದವರನ್ನು ಅಥವಾ ಅಧಿಕಾರಿಗಳ ಕರ್ತವ್ಯಕ್ಕೆ ತಡೆಯೊಡ್ಡುವವರನ್ನು ಜೈಲಿಗೆ ಹಾಕಿ ಎಂದು ಕೇಂದ್ರ ಸರ್ಕಾರ ರಾಜ್ಯಸರ್ಕಾರಗಳಿಗೆ ಹೇಳಿದೆ.ಲಾಕ್‌ಡೌನ್ ವೇಳೆ ವೈದ್ಯರು, ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಜನರು ಹಲ್ಲೆ ನಡೆಸಿರುವ ಘಟನೆ ವರದಿಯಾಗುತ್ತಿದ್ದು ಈ ರೀತಿ ತೊಂದರೆಯೊಡ್ಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಹೇಳಿದೆ.

ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ ಅಥವಾ ಯಾವುದೇ ಸರ್ಕಾರಿ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ತಡೆಯೊಡ್ಡಿದರೆ ಅಂಥವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬೇಕು. ಇಂಥಾ ಕೃತ್ಯದಲ್ಲಿ ಯಾರಿಗಾದರೂ ಪ್ರಾಣಹಾನಿ ಸಂಭವಿಸಿದರೆ ತಪ್ಪಿತಸ್ಥರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಬೇಕು.

ಈ ಬಗ್ಗೆ ಸಚಿವ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಅದೇ ವೇಳೆ ಹಣಕ್ಕಾಗಿ ಯಾರಾದರೂ ಸುಳ್ಳು ಕತೆ ಹೇಳಿದ್ದರೆ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು.

ADVERTISEMENT

ತಪ್ಪಾದ ಎಚ್ಚರಿಕೆ ಅಥವಾ ಜನರಲ್ಲಿ ಆತಂಕ ಸೃಷ್ಟಿಸಿದರೆ ತಪ್ಪಿತಸ್ಥರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಕೇಂದ್ರ ಹೇಳಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಆರೋಗ್ಯ ಕಾರ್ಯಕರ್ತರನ್ನು ಅಟ್ಟಾಡಿಸಿ, ಕಲ್ಲು ತೂರಾಟ ಮಾಡುತ್ತಿರುವ ಅಮಾನವೀಯ ಘಟನೆಗಳ ವಿಡಿಯೊ ನೋಡಿದ ನಂತರ ಕೇಂದ್ರ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.