ಮುಂಬೈ: ಶಿವಸೇನಾ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿ ಸರ್ಕಾರವನ್ನು ‘ಅನೈತಿಕ‘ ಎಂದಿರುವ ಬಿಜೆಪಿಗೆ ಆ ಪಕ್ಷದ ಸಂಸದ ಸಂಜಯ್ ರಾವುತ್, ‘ಈ ಸರ್ಕಾರ ಅವಧಿ ಮುಗಿಯುವವರೆಗೂ ಸ್ವಾಭಾವಿಕವಾಗಿಯೇ ಇರಲಿದೆ‘ ಎಂದು ತಿರುಗೇಟು ನೀಡಿದ್ದಾರೆ.
ಪಕ್ಷದ ಮುಖವಾಣಿ ‘ಸಾಮ್ನಾ‘ದಲ್ಲಿ ತಮ್ಮ ವಾರದ ಅಂಕಣ ‘ರೊಕ್ತೋಕ್‘ನಲ್ಲಿ ಈ ಕುರಿತು ಪ್ರಸ್ತಾಪಿಸಿರುವ ಅವರು, ಮೈತ್ರಿ ಸರ್ಕಾರ ಆರಂಭವಾಗುವ ಮುನ್ನ ಬಿಜೆಪಿ ಮತ್ತು ಎನ್ಸಿಪಿ ನಡುವಿನ ಅಲ್ಪಾವಧಿ ಸರ್ಕಾರ ಬಿದ್ದು ಹೋದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಕಳೆದ ವಾರ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಎಂವಿಎ ಸರ್ಕಾರವನ್ನು ‘ಅನೈತಿಕ ಮೈತ್ರಿ‘ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯಿಸಿರುವ ರಾವತ್, ‘ಬಿಜೆಪಿಯವರು ನಮ್ಮ ಸರ್ಕಾರ ಬೀಳುವುದಾಗಿ ಭವಿಷ್ಯ ನುಡಿಯುತ್ತಲೇ ಇರುತ್ತಾರೆ. ಅದು ಅವರ ಪಕ್ಷ ಅನುಸರಿಸುವ ರಹಸ್ಯ ಚಟುವಟಿಕೆಗಳು ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ಅವಲಂಬಿತವಾಗಿರುತ್ತದೆ‘ ಎಂದು ಆರೋಪಿಸಿದ್ದಾರೆ.
‘ಸರ್ಕಾರ ಇರುವವರೆಗೂ ಅದು ಸ್ವಾಭಾವಿಕವಾಗಿರುತ್ತದೆ. ಆದರೆ, ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ)ದಂತಹ ಏಜೆನ್ಸಿಗಳನ್ನು ಬಳಸಲಾಗುತ್ತಿದೆ. ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುವವರನ್ನು ಮತ್ತು ಆತ್ಮಹತ್ಯೆಗೆ ಪ್ರಚೋದಿಸುವವರನ್ನು ರಕ್ಷಿಸಲಾಗುತ್ತದೆ‘ ಎಂದು ರಾವುತ್ ತಮ್ಮ ಅಂಕಣದಲ್ಲಿ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.