ಮಹಾರಾಷ್ಟ್ರದ ನಾಗ್ಪುರದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಪೊಲಿಸರು ಬೀದಿಗಳಲ್ಲಿ ಗಸ್ತು ತಿರುಗಿದರು
ಪಿಟಿಐ ಚಿತ್ರ
ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಕೆಲ ದಿನಗಳ ಹಿಂದೆ ನಡೆದ ಗಲಭೆಗೆ ಸಂಬಂಧಿಸಿದಂತೆ ಶುಕ್ರವಾರ 14 ಜನರನ್ನು ಬಂಧಿಸಿ ಮೂರು ಹೊಸ ಎಫ್ಐಆರ್ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಇದರಿಂದಾಗಿ ಬಂಧಿತರ ಸಂಖ್ಯೆ 105ಕ್ಕೆ ಏರಿದೆ.
ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ನಾಗ್ಪುರದಲ್ಲಿ ಮಾರ್ಚ್ 17ರಂದು ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ಕಾರಣವಾಗಿತ್ತು. ಕುರಾನ್ ಮತ್ತು ಅದಕ್ಕೆ ಹೊದಿಸಿದ್ದ ವಸ್ತ್ರ ಸುಡಲಾಗಿದೆ ಎಂಬ ವದಂತಿ ಕಾಳ್ಗಿಚ್ಚಿನಂತೆ ಹರಡಿದ ಪರಿಣಾಮ ಗಲಭೆ ನಡೆಸಿದವರು, ಕಲ್ಲು ಹಾಗೂ ಪೆಟ್ರೋಲ್ ಬಾಂಬ್ಗಳನ್ನು ಪೊಲೀಸರತ್ತ ಎಸೆದು, ಹಲವು ವಾಹನಗಳನ್ನು ಸುಟ್ಟು ಹಾಕಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಬಂಧಿತರಾದವರಲ್ಲಿ 10 ಜನ ಅಪ್ರಾಪ್ತರೂ ಸೇರಿದ್ದಾರೆ. ಶುಕ್ರವಾರ ಬಂಧಿಸಿರುವ 14 ಆರೋಪಿಗಳನ್ನು ನಾಗ್ಪುರದ ವಿವಿಧ ಪ್ರದೇಶಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ರವೀಂದರ್ ಕುಮಾರ್ ಸಿಂಘಾಲ್ ಹೇಳಿದ್ದಾರೆ.
‘ನಗರದಲ್ಲಿ ಕರ್ಫ್ಯೂ ಮುಂದುವರಿದ್ದು, ಉನ್ನತ ಮಟ್ಟದ ಸಭೆಯ ನಂತರ ಅದನ್ನು ಸಡಿಲಿಸುವ ಕುರಿತು ಚಿಂತಿಸಲಾಗುವುದು. ಘಟನೆಯಲ್ಲಿ ಮೂವರು ಡಿಸಿಪಿ ರ್ಯಾಂಕ್ನ ಅಧಿಕಾರಿಗಳನ್ನು ಒಳಗೊಂಡು 33 ಪೊಲೀಸರು ಗಾಯಗೊಂಡಿದ್ದಾರೆ. ಮಹಿಳಾ ಕಾನ್ಸ್ಟೆಬಲ್ ಮೇಲೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಪ್ರಮುಖ ಆರೋಪಿ ಫಾಹೀಂ ಖಾನ್ನನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.