ಸಾಂದರ್ಭಿಕ-ಚಿತ್ರ
ಎ.ಐ ಚಿತ್ರ
ಕೊಟ್ಟಾಯಂ, ಕೇರಳ: ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ (ಎಸ್ಎನ್ಡಿಪಿ) ಜೊತೆಗಿನ ಮೈತ್ರಿಯಿಂದ ಹೊರ ನಡೆಯುವುದಾಗಿ ನಾಯರ್ ಸರ್ವೀಸ್ ಸೊಸೈಟಿ(ಎನ್ಎಸ್ಎಸ್) ಘೋಷಿಸಿದೆ. ಆ ಮೂಲಕ ಪ್ರಸ್ತಾವಿತ ಏಕತೆಯ ಹೋರಾಟವು ಆರಂಭದಲ್ಲಿಯೇ ಮುರಿದುಬಿದ್ದಿದೆ.
ಪೆರುನ್ನಾದಲ್ಲಿ ನಡೆದ ಎನ್ಎಸ್ಎಸ್ ನಿರ್ದೇಶಕರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ಸಂಬಂಧ ಎನ್ಎಸ್ಎಸ್ನ ಪ್ರಧಾನ ಕಾರ್ಯದರ್ಶಿ ಜಿ.ಸುಕುಮಾರನ್ ನಾಯರ್ ಅವರ ಸಹಿ ಇರುವ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.
‘ಈ ಹಿಂದೆ ನಿರ್ಧರಿಸಿದ್ದ ಎಸ್ಎನ್ಡಿಪಿ ಹಾಗೂ ಎನ್ಎಸ್ಎಸ್ ನಡುವಿನ ಏಕತೆಯು ಹಲವು ಕಾರಣಗಳಿಂದ ಯಶಸ್ವಿಯಾಗುತ್ತಿಲ್ಲ. ಸದ್ಯದ ರಾಜಕೀಯ ಪರಿಸ್ಥಿತಿಯೂ ಅನುಕೂಲಕರವಾಗಿಲ್ಲ’ ಎಂದು ತಿಳಿಸಲಾಗಿದೆ.
ಎನ್ಎಸ್ಎಸ್ ಸಂಘಟನೆಯು ನಾಯರ್ ಸಮುದಾಯವನ್ನು ಪ್ರತಿನಿಧಿಸಿದರೆ, ಎಸ್ಎನ್ಡಿಪಿಯು ಈಳವ ಸಮುದಾಯವನ್ನು ಪ್ರತಿನಿಧಿಸುತ್ತದೆ.
‘ಇಂತಹ ಏಕತೆಯು ಅಪ್ರಾಯೋಗಿಕವಾಗಿದೆ. ಎನ್ಎಸ್ಎಸ್ ಮೊದಲಿನಿಂದಲೂ ಎಲ್ಲ ರಾಜಕೀಯ ಪಕ್ಷಗಳಿಂದಲೂ ಸಮಾನ ಅಂತರ ಕಾಯ್ದುಕೊಂಡಿದೆ. ಎಲ್ಲ ಸಮುದಾಯಗಳ ಜೊತೆಗಿರುವ ಸ್ನೇಹಪರ ಸಂಬಂಧವು ಎಸ್ಎನ್ಡಿಪಿ ಜೊತೆಗೂ ಮುಂದುವರಿಯಲಿದೆ’ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.