ADVERTISEMENT

ನಾರದ ಪ್ರಕರಣ: ಜೈಲಲ್ಲಿರುವ ಟಿಎಂಸಿ ಮುಖಂಡರ ಗೃಹಬಂಧನಕ್ಕೆ ಹೈಕೋರ್ಟ್‌ ಆದೇಶ

ಏಜೆನ್ಸೀಸ್
Published 21 ಮೇ 2021, 8:23 IST
Last Updated 21 ಮೇ 2021, 8:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋಲ್ಕತ್ತ: ನಾರದ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿ ಜೈಲಲ್ಲಿರುವ ತೃಣಮೂಲ ಕಾಂಗ್ರೆಸ್‌ನ ನಾಲ್ವರು ನಾಯಕರನ್ನು ಗೃಹಬಂಧನದಲ್ಲಿಡಲು ಕೋಲ್ಕತ್ತ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.

'ನಾರದ ಪ್ರಕರಣದ ವಿಚಾರಣೆಯು ಉನ್ನತ ಪೀಠದಿಂದ ನಡೆಯಬೇಕಿದೆ. ಆ ಕಾರಣ ಜೈಲಿನಲ್ಲಿರುವ ಟಿಎಂಸಿ ನಾಯಕರನ್ನು ಗೃಹಬಂಧನದಲ್ಲಿ ಇಡಬೇಕು' ಎಂದು ನ್ಯಾಯಾಲಯವು ತಿಳಿಸಿದೆ.

ನಾರದ ಮಾರುವೇಷ ಕಾರ್ಯಾಚರಣೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್‌ನ ಮೂವರು ಹಿರಿಯ ನಾಯಕರು ಮತ್ತು ಸಚಿವರನ್ನು ಸಿಬಿಐ ಸೋಮವಾರ ಬೆಳಿಗ್ಗೆ ಬಂಧಿಸಿತ್ತು.

ADVERTISEMENT

ಸಾರಿಗೆ ಸಚಿವ ಫಿರ್ಹಾದ್‌ ಹಕೀಮ್‌, ಪಂಚಾಯತ್‌ ಸಚಿವ ಸುಬ್ರತಾ ಮುಖರ್ಜಿ, ಶಾಸಕ ಮದನ್‌ ಮಿತ್ರಾ ಮತ್ತು ಟಿಎಂಸಿಯ ಮಾಜಿ ಮುಖಂಡ ಸೋವನ್‌ ಚಟರ್ಜಿ ಅವರನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿದೆ.

ಲಂಚ ಹಗರಣ ಸಂಬಂಧಿತ ಪ್ರಕರಣವನ್ನು ಪಶ್ಚಿಮ ಬಂಗಾಳದಿಂದ ವರ್ಗಾಯಿಸುವಂತೆ ಕೋರಿ ಸಿಬಿಐ ಕೋಲ್ಕತ್ತ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾನೂನು ಸಚಿವ ಮಲಯ್‌ ಘಟಕ್‌ ಅವರ ಹೆಸರನ್ನು ಸಿಬಿಐ ಅರ್ಜಿಯಲ್ಲಿ ಹೆಸರಿಸಿದೆ.

ಈ ಪ್ರಕರಣದಲ್ಲಿ ನಾಲ್ವರು ಮುಖಂಡರಿಗೂ ಸಿಬಿಐ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಆದರೆ, ಕೋಲ್ಕತ್ತ ಹೈಕೋರ್ಟ್‌ ಜಾಮೀನು ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ತೆರವುಗೊಳಿಸುವಂತೆ ಮುಖಂಡರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.