ಉತ್ತರ ಪ್ರದೇಶ: ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಮ ಜನ್ಮಭೂಮಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಉತ್ತರ ಪ್ರದೇಶ ಸರ್ಕಾರ ದೀಪಾವಳಿ ಅಂಗವಾಗಿ ಸರಯೂ ನದಿ ತೀರದಲ್ಲಿ ಸುಮಾರು 18 ಲಕ್ಷ ಹಣತೆಗಳನ್ನು ಬೆಳಗುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಮನ ಸಂಕಲ್ಪ ಶಕ್ತಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ದೀಪಾವಳಿಯಿದು. ರಾಮನ ಕರ್ತವ್ಯ ಬಲವನ್ನು ನಾವು ಕರ್ತವ್ಯ ಪಥವಾಗಿ ಅನುಷ್ಠಾನಗೊಳಿಸಿದ್ದೇವೆ ಎಂದರು.
ತಮ್ಮ ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಯೋಜನೆಗೆ ಪ್ರಭು ಶ್ರೀರಾಮನೇ ಪ್ರೇರಣೆ ಎಂದು ಮೋದಿ ಹೇಳಿದರು.
ದೀಪೋತ್ಸವಕ್ಕೆ ಭವ್ಯ ವೇದಿಕೆ ಸಿದ್ಧಗೊಂಡಿದ್ದು, ರಾಮ–ಸೀತೆ ಸೇರಿದಂತೆ ರಾಮಾಯಣದ ಪ್ರಮುಖರನ್ನು ಪ್ರತಿನಿಧಿಸುವ ವೇಷಧಾರಿಗಳು ವೇದಿಕೆಯಲ್ಲಿ ಕುಳಿತಿದ್ದರು.
ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಮ–ಸೀತೆ ವೇಷಧಾರಿಗಳಿಗೆ ಸಾಂಪ್ರದಾಯಿಕ ರಾಜ್ಯಾಭಿಷೇಕ ನೆರವೇರಿಸಿದರು.
ಕಾರ್ಯಕ್ರಮದ ಬಳಿಕ ಸರಯೂ ನದಿ ತೀರದಲ್ಲಿನ ಆರತಿಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಅದರ ನಂತರ ದೀಪವನ್ನು ಬೆಳಗುವ ಕಾರ್ಯಕ್ರಮ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.