ADVERTISEMENT

ಯಾರ ಮಗನೇ ಆಗಿರಲಿ, ದುರಹಂಕಾರ ಸಹಿಸಲ್ಲ: ಪ್ರಧಾನಿ ಮೋದಿ

ಅಧಿಕಾರಿಯೊಬ್ಬರಿಗೆ ಕ್ರಿಕೆಟ್‌ ಬ್ಯಾಟ್‌ನಿಂದ ಹೊಡೆದ ಪ್ರಕರಣ

ಪಿಟಿಐ
Published 2 ಜುಲೈ 2019, 18:45 IST
Last Updated 2 ಜುಲೈ 2019, 18:45 IST
ಮೋದಿ
ಮೋದಿ   

ನವದೆಹಲಿ: ‘ಯಾರೇ ಆಗಿರಲಿ, ಯಾರ ಮಗನೇ ಆಗಿರಲಿ, ಅಂತಹ ಅಹಂಕಾರ ಮತ್ತು ದುರ್ವರ್ತನೆಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಅವರ ಮಗ, ಶಾಸಕ ಆಕಾಶ್‌ ವಿಜಯವರ್ಗೀಯ ಅವರು ಇತ್ತೀಚೆಗೆ ಅಧಿಕಾರಿಯೊಬ್ಬರಿಗೆ ಕ್ರಿಕೆಟ್‌ ಬ್ಯಾಟ್‌ನಿಂದ ಹೊಡೆದ ಪ್ರಕರಣ ದಾಖಲಾಗಿತ್ತು. ಅವರನ್ನು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿತ್ತು.

ಈ ಪ್ರಕರಣವನ್ನು ಮೋದಿ ಉಲ್ಲೇಖಿಸಲಿಲ್ಲ. ಆದರೆ, ಪ್ರಧಾನಿಯವರು ಮಾತನಾಡುವಾಗ ಕೈಲಾಶ್‌ ವಿಜಯವರ್ಗೀಯ ಅವರು ಸಭೆಯಲ್ಲಿ ಇದ್ದರು.

ADVERTISEMENT

ಇಂತಹ ವರ್ತನೆ ಪಕ್ಷಕ್ಕೆ ಕೆಟ್ಟ ಹೆಸರು ತರುತ್ತದೆ ಮತ್ತು ಅದು ಸ್ವೀಕಾರಾರ್ಹವಲ್ಲ. ಯಾರಾದರೂ ತಪ್ಪು ಮಾಡಿದರೆ ಕ್ಷಮೆ ಯಾಚಿಸುವ ಮನೋಭಾವವಾದರೂ ಇರಬೇಕು ಎಂದು ಮೋದಿ ಹೇಳಿದರು. ಆಕಾಶ್‌ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಲ್ಲದೆ ಕ್ಷಮೆ ಯಾಚಿಸಲು ನಿರಾಕರಿಸಿದ್ದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭಾರಿ ಗೆಲುವು ಪಡೆದ ಬಳಿಕ ನಡೆದ ಮೊದಲ ಸಂಸದೀಯ ಪಕ್ಷ ಸಭೆಯಲ್ಲಿ ಅವರು ಮಾತನಾಡಿದರು. ಹಿರಿಯ ಮುಖಂಡರು ಈ ಸಂದರ್ಭದಲ್ಲಿ ಮೋದಿ ಅವರನ್ನು ಸನ್ಮಾನಿಸಿದರು.

ಪಕ್ಷದ ಅಧ್ಯಕ್ಷ ಅಮಿತ್‌ ಶಾ ಮತ್ತು ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೂ ಸನ್ಮಾನಿಸಲಾಯಿತು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.