ರಾಯಪುರ :’ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ ಆರು ವರ್ಷಗಳ ಆಡಳಿತದಲ್ಲಿ ಅಸಂಘಟಿತ ಆರ್ಥಿಕತೆಯನ್ನು ನಾಶಪಡಿಸಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.
ಛತ್ತೀಸಗಡದ 22 ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಕಚೇರಿ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
‘ರೈತರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಿಗಳ ಮೇಲೆ ದೇಶದ ಆರ್ಥಿಕತೆ ಪರಿಣಾಮ ಬೀರಿದೆ. ಇದೇ ರೀತಿ ಮುಂದುವರಿದರೆ ಮುಂಬರುವ ದಿನಗಳಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಾಗುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.
‘ಅಸಂಘಟಿತ ಆರ್ಥಿಕತೆಯು ದೇಶದಲ್ಲಿ ಶೇಕಡ 90 ರಷ್ಟು ಉದ್ಯೋಗವನ್ನು ಸೃಷ್ಟಿಸುತ್ತದೆ. ಆದರೆ, ನೋಟು ರದ್ದತಿ ಮತ್ತು ಜಿಎಸ್ಟಿ ಜಾರಿಯಲ್ಲಿನ ಲೋಪ ಇದಕ್ಕೆ ಹೊಡೆತ ನೀಡಿದೆ’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ಕಳೆದ ಆರು ವರ್ಷಗಳಿಂದ ಅಸಂಘಟಿತ ಆರ್ಥಿಕತೆಯ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ವಲಯದಲ್ಲಿರುವ ಹಣವನ್ನು ದೊಡ್ಡ ಉದ್ಯಮಿಗಳಿಗೆ ವರ್ಗಾಯಿಸುವ ಇರಾದೆ ಮೋದಿ ಅವರದ್ದಾಗಿದೆ’ ಎಂದು ಅವರು ದೂರಿದ್ದಾರೆ.
‘ದೇಶದ ಅಭಿವೃದ್ಧಿಗೆಸಂಘಟಿತ ಮತ್ತು ಅಸಂಘಟಿತ ಆರ್ಥಿಕತೆಗಳ ನಡುವಿನ ಸಮತೋಲನವನ್ನು ಪುನಃ ಸ್ಥಾಪಿಸುವ ಅಗತ್ಯವಿದೆ’ ಎಂದೂ ಅವರು ಹೇಳಿದ್ದಾರೆ.
‘ದೇಶದ ಅಸಂಘಟಿತ ಆರ್ಥಿಕತೆಯು ಸುರಕ್ಷಿತವಾಗಿದ್ದರೆ, ಪ್ರತಿಕೂಲ ಸಂದರ್ಭಗಳನ್ನು ನಿಭಾಯಿಸುವುದು ಸುಲಭವಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.