ನವದೆಹಲಿ:‘ಪಾಕಿಸ್ತಾನದ ಭಾಗವಾಗಿದ್ದ ಬಾಂಗ್ಲಾದೇಶವನ್ನು ಅದರಿಂದ ಬೇರ್ಪಡಿಸಿದ್ದು ಕಾಂಗ್ರೆಸ್. ಇದನ್ನು ಜನರ ಮುಂದೆ ಹೇಳುವ ಧೈರ್ಯ ಪ್ರಧಾನಿ ನರೇಂದ್ರ ಮೋದಿಗೆ ಇಲ್ಲ’ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹರಿಹಾಯ್ದಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ.
‘ಮೋದಿಗೆ ನೆನಪಿರುವುದು 370ನೇ ವಿಧಿ ಮಾತ್ರ. ಪಾಕಿಸ್ತಾನವನ್ನು ವಿಭಜನೆ ಮಾಡಲಾಗಿದೆ ಮತ್ತು ಅದನ್ನು ಮಾಡಿದವರು ಯಾರು ಎಂಬುದು ಮೋದಿ ಅವರಿಗೆ ಗೊತ್ತಿಲ್ಲ. ಪಾಕಿಸ್ತಾನವನ್ನು ಒಡೆದದ್ದು ಕಾಂಗ್ರೆಸ್. ಆಗ ಮೋದಿ ಅವರು ಎಲ್ಲಿದ್ದರು’ ಎಂದು ಸಿಬಲ್ ಪ್ರಶ್ನಿಸಿದರು.
‘ಮೋದಿ ಅವರೇ, ನಿಮಗೆ 370ನೇ ವಿಧಿ ಮಾತ್ರ ನೆನಪಿನಲ್ಲಿ ಇರುತ್ತದೆ. ಆದರೆ ಸಂವಿಧಾನಬದ್ಧ ಕರ್ತವ್ಯಗಳು ನೆನಪಿನಲ್ಲಿ ಇರುವುದಿಲ್ಲ. ದೇಶದ ಶೇ 93ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಜನರು ಹೇಗೆ ಬಳಲುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿಲ್ಲ.ಹರಿಯಾಣ, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್ಗಳಲ್ಲಿ ಮಾನವ ಅಭಿವೃದ್ಧಿಯ ಸೂಚ್ಯಂಕ ಎಷ್ಟಿದೆ ಎಂಬುದು ನಿಮಗೆ ಗೊತ್ತಿದೆಯೇ? ದೇಶದಲ್ಲಿ ನಿರುದ್ಯೋಗ ಯಾವ ಮಟ್ಟದಲ್ಲಿದೆ ಎಂಬುದು ಗೊತ್ತಿದೆಯೇ’ ಎಂದು ಅವರು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.