ನವದೆಹಲಿ: ಅಫ್ಗಾನಿಸ್ತಾನವು ತಾಲಿಬಾನ್ ನಿಯಂತ್ರಣದಲ್ಲಿರುವ ಕಾರಣ ಭಾರತ ಅಲ್ಲಿ ಈಗಾಗಲೇ ಮೂಲಸೌಕರ್ಯಕ್ಕೆ ಹೂಡಿರುವ ಬಂಡವಾಳವನ್ನು ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುವರು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಭಾರತವು ಅಲ್ಲಿ ಕೈಗೊಂಡಿರುವ ಅನೇಕ ಮೂಲ ಸೌಕರ್ಯ ಯೋಜನೆಗಳು ಪೂರ್ಣಗೊಂಡಿವೆ. ಕೆಲವು ಮಾತ್ರ ಇನ್ನೂ ಪೂರ್ಣಗೊಳ್ಳಬೇಕಿವೆ. ಇವನ್ನು ಮುಂದುವರಿಸುವ ಬಗ್ಗೆ ಮೋದಿ ಅವರು ವಿದೇಶಾಂಗ ವ್ಯವಹಾರ ಸಚಿವ ಜತೆ ಚರ್ಚಿಸಿ ತೀರ್ಮಾನಿಸಲಿದ್ದಾರೆ ಎಂದು ಅವರು ತಿಳಿಸಿದರು.
’ನಾವು ಅಲ್ಲಿ ಸಲ್ಮಾ ಅಣೆಕಟ್ಟೆ ನಿರ್ಮಿಸಿದ್ದೇವೆ. ಜಲ ಸಂಪನ್ಮೂಲ ಕ್ಷೇತ್ರದಲ್ಲಿ ನಾವು ಅಲ್ಲಿ ಕೆಲಸ ಮಾಡಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
’ಮೈತ್ರಿ ರಾಷ್ಟ್ರವಾಗಿ ನಾವು ಅಲ್ಲಿ ಕೆಲವು ರಸ್ತೆಗಳನ್ನು ನಿರ್ಮಿಸಲು ಕೂಡ ಅಫ್ಗಾನಿಸ್ತಾನದ ಸರ್ಕಾರದ ಜತೆ ಚರ್ಚಿಸಿದ್ದೆವು. ಆದರೆ ಆ ಕಾಮಗಾರಿಗಳನ್ನು ಆರಂಭಿಸದೇ ಇದ್ದದ್ದು ಒಳ್ಳೆಯದೇ ಆಯಿತು. ಪರಿಸ್ಥಿತಿ ಅಲ್ಲಿ ಈಗ ಕಳವಳವಾರಿಯಾಗಿದೆ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.