ADVERTISEMENT

ಈ ವರ್ಷ 40 ಮಂದಿಗಷ್ಟೇ ‘ಸಾಗರೋತ್ತರ’ ವಿದ್ಯಾರ್ಥಿ ವೇತನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 18:40 IST
Last Updated 7 ಜುಲೈ 2025, 18:40 IST
<div class="paragraphs"><p>ವಿದ್ಯಾರ್ಥಿ ವೇತನ</p></div>

ವಿದ್ಯಾರ್ಥಿ ವೇತನ

   

ನವದೆಹಲಿ: ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯು 2025–26ನೇ ಸಾಲಿನ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನಕ್ಕೆ 40 ವಿದ್ಯಾರ್ಥಿಗಳನ್ನಷ್ಟೇ ಆಯ್ಕೆ ಮಾಡಿದೆ. ಅನುದಾನದ ಲಭ್ಯತೆ ನೋಡಿಕೊಂಡು ಉಳಿದ 66 ಮಂದಿಗೆ ವಿದ್ಯಾರ್ಥಿ ವೇತನ ನೀಡುವುದಾಗಿ ಹೇಳಿಕೊಂಡಿದೆ.

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಪರಿಶಿಷ್ಟ ಜಾತಿ, ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುಗಳು, ಭೂರಹಿತ ಕೃಷಿ ಕಾರ್ಮಿಕರು ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳ ವರ್ಗದ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳು. ಈ ವಿದ್ಯಾರ್ಥಿವೇತನದ ಮೂಲಕ ಸ್ನಾತಕೋತ್ತರ ಮತ್ತು ಪಿಎಚ್‌.ಡಿ ಅಧ್ಯಯನ ನಡೆಸಲು ಹಣಕಾಸಿನ ನೆರವು ನೀಡಲಾಗುತ್ತದೆ.

ADVERTISEMENT

ಈ ಯೋಜನೆಗಾಗಿ ಈ ಸಲ ಮಾರ್ಚ್‌ 29ರಿಂದ ಏಪ್ರಿಲ್‌ 17ರ ನಡುವೆ 440 ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕರಿಸಲಾ ಗಿದೆ. ಈ ಪೈಕಿ, 106 ಮಂದಿಯನ್ನು ಆಯ್ಕೆ ಮಾಡಲಾಗಿದೆ. 64 ಮಂದಿಯನ್ನು ಆಯ್ಕೆಯಾಗದ ಪಟ್ಟಿಯಲ್ಲಿ ಸೇರಿಸಲಾಗಿದೆ (ಅಂದರೆ, ರಾಜ್ಯಗಳ ಪಟ್ಟಿ ಹಾಗೂ ಇತರ ಕೋಟಾ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ) ಅರ್ಹತಾ ಮಾನದಂಡ ಪೂರೈಸದಿರುವುದು, ಅಪೂರ್ಣ ದಾಖಲಾತಿಹಾಗೂ ಇತರ ಕಾರಣಗಳಿಗಾಗಿ 270 ಮಂದಿಯ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಈ ಹಿಂದಿನ ವರ್ಷಗಳಲ್ಲಿ, ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಎಲ್ಲರಿಗೂ ವಿದ್ಯಾರ್ಥಿ ವೇತನದ ಪತ್ರಗಳನ್ನು ಒಂದೇ ಸಲ ನೀಡಲಾಗುತ್ತಿತ್ತು. ಆದರೆ, ಈ ಸಲ ಹಂತ ಹಂತವಾಗಿ ನೀಡುತ್ತಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

ಫೆಬ್ರುವರಿಯಲ್ಲಿ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ, ಈ ಯೋಜನೆಗಾಗಿ ₹130 ಕೋಟಿ ಮೀಸಲು ಇಡಲಾಗಿತ್ತು. ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಈ ಮೊತ್ತ ಶೇ 38ರಷ್ಟು ಹೆಚ್ಚಳ ಆಗಿದೆ. 2024ರ ಡಿಸೆಂಬರ್‌ 19ರಿಂದ ಇಲ್ಲಿಯವರೆಗೆ ಸಚಿವಾಲಯವು 80 ವಿದ್ಯಾರ್ಥಿಗಳಿಗೆ ₹56 ಕೋಟಿ ವಿದ್ಯಾರ್ಥಿ ವೇತನ ನೀಡಿದೆ.

ಉಳಿದ 66 ಮಂದಿಗೆ ವಿದ್ಯಾರ್ಥಿ ವೇತನ ನೀಡಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಅನುಮೋದನೆ ಬೇಕಿದೆ. ನಮ್ಮಲ್ಲಿ ಅನುದಾನ ಲಭ್ಯ ಇದೆ. ಆದರೆ, ಸಂಪುಟ ಸಮಿತಿಯ ಅನುಮೋದನೆ ಸಿಗದೆ ಏನೂ ಮಾಡುವಂತಿಲ್ಲ’ ಎಂದು ಸಚಿವಾಲಯದ ಅಧಿಕಾರಿ ಯೊಬ್ಬರು ತಿಳಿಸಿದರು.

ಇದಕ್ಕೂ ಮುನ್ನ, ಮೌಲಾನಾ ಅಜಾದ್‌ ರಾಷ್ಟ್ರೀಯ ಫೆಲೋಶಿಪ್‌ ಯೋಜನೆಯಲ್ಲೂ ಇದೇ ರೀತಿಯ ಸಮಸ್ಯೆ ಉಂಟಾಗಿತ್ತು. ಈ ವರ್ಷದ ಜನವರಿಯಿಂದ 1400 ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್‌ ಸಿಗದೆ ಪಡಿಪಾಟಲು ಅನುಭವಿಸಿದ್ದರು. ವಿವಿಧ ವಿದ್ಯಾರ್ಥಿ ವೇತನ ಯೋಜನೆಗಳಲ್ಲಿ ಉಂಟಾಗಿರುವ ಗೊಂದಲ ಪರಿಹರಿಸುವಂತೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ವಿಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.