ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲೀಗ ರಾಷ್ಟ್ರೀಯತೆಯ ವಿಚಾರ ಮುನ್ನೆಲೆಗೆ ಬಂದಿದೆ. ಎರಡನೇ ಹಂತಕ್ಕೆ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಬಿಜೆಪಿ ರಾಷ್ಟ್ರೀಯತೆಯ ವಿಚಾರ ಇಟ್ಟುಕೊಂಡು ಮತದಾರರ ಒಲವು ಗಳಿಸಲು ಯತ್ನಿಸುತ್ತಿದೆ. ಪ್ರತಿಪಕ್ಷಗಳು ಲಡಾಖ್ ವಿಷಯ ಮುಂದಿಟ್ಟುಕೊಂಡು ಚೀನಾದ ಅತಿಕ್ರಮಣ ಹಾಗೂ ಸರ್ಕಾರದ ಮೌನವನ್ನು ಚುನಾವಣೆಯ ದಾಳವಾಗಿ ಬಳಸಿಕೊಳ್ಳುತ್ತಿವೆ.
ಪುಲ್ವಾಮಾ ದಾಳಿಗೆ ಪಾಕ್ ಕಾರಣ ಎಂದು ಪಾಕಿಸ್ತಾನ ಸಚಿವರೊಬ್ಬರು ಒಪ್ಪಿಕೊಂಡಿದ್ದನ್ನು ಪ್ರಧಾನಿ ಮೋದಿ ಅವರು ಏಕತಾ ದಿನದ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಸೈನಿಕರು ಹುತಾತ್ಮರಾದ ಘಟನೆಯಲ್ಲಿ ಪ್ರತಿಪಕ್ಷಗಳು ರಾಜಕೀಯ ಹೇಳಿಕೆ ನೀಡಿದ್ದನ್ನು ಖಂಡಿಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಈ ಬಗ್ಗೆ ಕ್ಷಮೆ ಕೇಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ.
ಬಿಹಾರದ ಭಾಗಲ್ಪುರ ಸಮಾವೇಶದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ನುಡಿದಂತೆಯೇ ಎನ್ಡಿಎ ನಡೆದುಕೊಳ್ಳುತ್ತದೆ. ಪಾಕಿಸ್ತಾನದ ಸಚಿವರು ನೀಡಿದ ಹೇಳಿಕೆಯಿಂದ ಸತ್ಯ ಹೊರಬಂದಿದೆ’ ಎಂದಿದ್ದಾರೆ.
ಬಿಜೆಪಿಯ ಪಾಕಿಸ್ತಾನ ಕೇಂದ್ರಿತ ಪ್ರಚಾರವನ್ನು ಕಾಂಗ್ರೆಸ್ ಟೀಕಿಸಿದೆ.
ಮೋದಿ ರ್ಯಾಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಾಲ್ಕು ರ್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ. ಲಾಲು ಪ್ರಸಾದ್ ಅವರ ತವರು ಛಪ್ರಾದಲ್ಲಿ ಮೊದಲ ಸಮಾವೇಶ ಇದೆ. ಸಮಸ್ತಿಪುರ, ಮೋತಿಹಾರಿ ಹಾಗೂ ಬಗಾಹಾದಲ್ಲಿ ಉಳಿದ ರ್ಯಾಲಿಗಳು ನಿಗದಿಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.