
ಬಿಜಾಪುರ (ಛತ್ತೀಸಗಢ): ಇಲ್ಲಿನ ಗಂಗಲೂರು ಅರಣ್ಯ ಪ್ರದೇಶದಲ್ಲಿ ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿಯ ನಡುವೆ ಬುಧವಾರ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ 12 ಮಂದಿ ನಕ್ಸಲರನ್ನು ಹೊಡೆದುರುಳಿಸಲಾಗಿದ್ದು, ಜಿಲ್ಲಾ ಮೀಸಲು ಪೊಲೀಸ್ ಪಡೆಯ (ಡಿಆರ್ಜಿ) ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ.
ರಾಜ್ಯ ಪೊಲೀಸರ ಡಿಆರ್ಜಿ ಘಟಕ ಹಾಗೂ ವಿಶೇಷ ಕಾರ್ಯಪಡೆ ಮತ್ತು ಸಿಆರ್ಪಿಎಫ್ನ ಕೋಬ್ರಾ ತುಕಡಿಯ ಸಿಬ್ಬಂದಿ ಜಂಟಿಯಾಗಿ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಮುಂದಾಗಿದ್ದರು. ಈ ವೇಳೆ ಗುಂಡಿನ ಚಕಮಕಿ ನಡೆದಿದೆ.
ಮುಖ್ಯ ಕಾನ್ಸ್ಟೆಬಲ್ ಮೋನು ವಡಾದಿ, ಕಾನ್ಸ್ಟೆಬಲ್ ದುಕಾರು ಗೋಂಡೆ ಹಾಗೂ ಜವಾನ್ ರಮೇಶ್ ಸೋಧಿ ಅವರು ಮೃತಪಟ್ಟಿದ್ದಾರೆ. ಡಿಆರ್ಜಿಯ ಇನ್ನಿಬ್ಬರು ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ಸಿಂಗಲ್ ಲೋಡಿಂಗ್ ರೈಫಲ್ಸ್, ಇನ್ಸಾಸ್ ರೈಫಲ್ಸ್, .303 ರೈಫಲ್ಸ್ ಹಾಗೂ ಇತರೆ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತ ನಕ್ಸಲರ ಗುರುತನ್ನು ಪತ್ತೆಹಚ್ಚಬೇಕಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದೂ ಮಾಹಿತಿ ನೀಡಿದ್ದಾರೆ.
ಈ ಕಾರ್ಯಾಚರಣೆಯೊಂದಿಗೆ ಪ್ರಸಕ್ತ ವರ್ಷದಲ್ಲಿ 275 ನಕ್ಸಲರನ್ನು ಛತ್ತೀಸಗಢದಲ್ಲಿ ಎನ್ಕೌಂಟರ್ ಮಾಡಿದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.