ADVERTISEMENT

‘ಅರ್ನಬ್‌, ಪಾರ್ಥೊ ನಡುವಿನ ಸಂಭಾಷಣೆ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಿ’

ಪಿಟಿಐ
Published 18 ಜನವರಿ 2021, 8:26 IST
Last Updated 18 ಜನವರಿ 2021, 8:26 IST
ಅರ್ನಬ್‌ ಗೋಸ್ವಾಮಿ
ಅರ್ನಬ್‌ ಗೋಸ್ವಾಮಿ   

ಮುಂಬೈ: ರಿಪಬ್ಲಿಕ್‌ ಟಿ.ವಿ. ಸಂಪಾದಕ ಅರ್ನಬ್‌ ಗೋಸ್ವಾಮಿ ಮತ್ತು ಬಾರ್ಕ್‌ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(ಸಿಇಒ) ಪಾರ್ಥೊ ದಾಸ್‌ಗುಪ್ತಾ ನಡುವೆ ನಡೆದಿದೆ ಎನ್ನಲಾದ ವಾಟ್ಸ್ಆ್ಯಪ್‌ ಚಾಟ್‌ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಎನ್‌ಸಿಪಿ ಒತ್ತಾಯಿಸಿದೆ.

ಬಾಲಾಕೋಟ್‌ ವಾಯುನೆಲೆ ಮೇಲಿನ ದಾಳಿಯ ಗುಪ್ತಚರ ಮಾಹಿತಿ ಸೋರಿಕೆಯಾಗಿತ್ತು ಎಂಬ ವಿಷಯವನ್ನು ಉಲ್ಲೇಖಿಸಿದ ಎನ್‌ಸಿಪಿ ಮುಖ್ಯ ವಕ್ತಾರ ಮಹೇಶ್ ತಪಾಸೆ, ‘ಟಿಆರ್‌ಪಿಗೋಸ್ಕರ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಬಳಸಲಾಗಿದೆ ಎಂಬ ವಿಷಯ ನಿಜಕ್ಕೂ ಅಫಾತಕಾರಿಯಾಗಿದೆ’ ಎಂದರು.

‘ಈ ವಿಷಯ ಸಂಬಂಧ ನಾನು ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅವರನ್ನು ಮಂಗಳವಾರ ಭೇಟಿಯಾಗಲಿದ್ದೇನೆ. ಅಲ್ಲದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಬಳಿ ಈ ಬಗ್ಗೆ ಸ್ಪಷ್ಟನೆ ಕೂಡ ಕೇಳಲಿದ್ಧೇನೆ’ ಎಂದು ಮಹೇಶ್ ತಪಾಸೆ ಹೇಳಿದರು.

ADVERTISEMENT

‘ಅರ್ನಬ್‌ ಗೋಸ್ವಾಮಿಗೆ ಈ ರೀತಿಯ ಗೌಪ್ಯ ವಿಷಯ ಹೇಗೆ ಸಿಕ್ಕಿದೆ ಎಂಬುದೇ ದೊಡ್ಡ ಸವಾಲು. ಗೃಹ ಸಚಿವಾಲಯವು ಈ ಬಗ್ಗೆ ಶೀಘ್ರ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

‘ಮುಂಬೈ ಪೊಲೀಸರು ಮತ್ತು ಮಹಾ ವಿಕಾಸ್‌ ಅಘಾಡಿ ಸರ್ಕಾರದ ಹೆಸರಿಗೆ ಧಕ್ಕೆ ತರುವ ಕಾರ್ಯದಲ್ಲಿ ಅರ್ನಬ್‌ ಮುಂಚೂಣಿಯಲ್ಲಿದ್ದಾರೆ’ ಎಂದು ಅವರು ಟೀಕಿಸಿದರು.

‘ಗೋಸ್ವಾಮಿ ಅವರು ಪಾಲ್ಗರ್‌ ಘಟನೆಗೆ ಕೋಮು ಗಲಭೆಯ ಆಯಾಮ ನೀಡಲು ಪ್ರಯತ್ನಿಸಿದರು. ಅಲ್ಲದೆ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದಲ್ಲಿ ಸುಳ್ಳನ್ನು ಹೇಳಿದರು’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.