ನವದೆಹಲಿ: ಹವಾಮಾನ ಬದಲಾವಣೆ ತಡೆಗೆ ಜಾಗತಿಕ ಮಟ್ಟದಲ್ಲಿ ನಿರ್ದಿಷ್ಟವಾದ ಕಾರ್ಯಸೂಚಿ ಅಗತ್ಯ. ಈ ಕಾರ್ಯಸೂಚಿಯನ್ನು ತ್ವರಿತವಾಗಿ ಹಾಗೂ ದೊಡ್ಡಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.
ಅಮೆರಿಕ ಆಯೋಜಿಸಿದ್ದ ವರ್ಚುವಲ್ ಶೃಂಗಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿಶ್ವದ 40 ನಾಯಕರು ಈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.
‘ಹವಾಮಾನ ಬದಲಾವಣೆವೊಡ್ಡಿರುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ಕಾರ್ಯಪ್ರವೃತ್ತವಾಗಿದೆ’ ಎಂದು ಹೇಳಿದರು.
‘ಈ ವಿಷಯವಾಗಿ ಅಮೆರಿಕ ಹಾಗೂ ಭಾರತ ಒಟ್ಟಾಗಿ ಕೆಲಸ ಮಾಡುತ್ತಿವೆ. ‘ಇಂಡಿಯಾ–ಯುಎಸ್ ಕ್ಲೈಮೇಟ್ ಆ್ಯಂಡ್ ಕ್ಲೀನ್ ಎನರ್ಜಿ ಅಜೆಂಡಾ 2030 ಪಾರ್ಟನರ್ಶಿಪ್’ ಎಂಬ ಕಾರ್ಯಕ್ರಮವನ್ನು ನಾನು ಮತ್ತು ಅಧ್ಯಕ್ಷ ಜೋ ಬೈಡನ್ ಆರಂಭಿಸಲಿದ್ದೇವೆ’ ಎಂದರು.
‘ಹವಾಮಾನ ಬದಲಾವಣೆ ತಡೆಗೆ ಪೂರಕವಾದಂತಹ ಹೂಡಿಕೆಗೆ ಭಾರತ–ಅಮೆರಿಕ ಪ್ರೋತ್ಸಾಹ, ಶುದ್ಧ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಲು ಉಭಯ ದೇಶಗಳು ನಿರ್ಧರಿಸಿವೆ’ ಎಂದೂ ಹೇಳಿದರು.
‘ಇಡೀ ವಿಶ್ವವೇ ಈಗ ಕೋವಿಡ್ ಪಿಡುಗಿನ ವಿರುದ್ಧ ಹೋರಾಡುತ್ತಿದೆ. ಇಂಥ ಸಂದರ್ಭದಲ್ಲಿಯೇ ಶೃಂಗಸಭೆಯನ್ನು ಆಯೋಜಿಸಿರುವುದು ಸಕಾಲಿಕವಾಗಿದೆ. ಜಗತ್ತಿಗೆ ಹವಾಮಾನ ಬದಲಾವಣೆ ಒಡ್ಡಿರುವ ಅಪಾಯ ಇನ್ನೂ ಕೊನೆಗೊಂಡಿಲ್ಲ ಎಂಬುದನ್ನು ಈ ಶೃಂಗಸಭೆ ನೆನಪಿಸಿಕೊಟ್ಟಿದೆ’ ಎಂದರು.
‘ಕೋವಿಡ್–19 ಪಿಡುಗು ಕೊನೆಗೊಂಡ ನಂತರ ನಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದೂ ಮುಖ್ಯ. ಸುಸ್ಥಿರ ಜೀವನಶೈಲಿ ಹಾಗೂ ಹಳೆಯ ಪದ್ಧತಿಗಳ ಅಳವಡಿಕೆ ಕೋವಿಡ್ ನಂತರದ ಆರ್ಥಿಕತೆಯ ತಳಹದಿಯಾಗಿರಬೇಕು’ ಎಂದು ಮೋದಿ ಪ್ರತಿಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.