ಅಲಹಾಬಾದ್: ಉತ್ತರ ಪ್ರದೇಶದಲ್ಲಿ 2019 ಜನವರಿ ತಿಂಗಳಲ್ಲಿ ಕುಂಭಮೇಳ ನಡೆಯಲಿದ್ದು, ಅದಕ್ಕಾಗಿ ನಗರ ಸುಂದರಗೊಳಿಸುವ ಕಾರ್ಯ ಆರಂಭವಾಗಿದೆ. ನಗರ ಸುಂದರಗೊಳಿಸುವಾಗ ಇಲ್ಲಿನ ಬಲ್ಸಾನ್ ಚೌರಾಹದಲ್ಲಿರುವ ಜವಾಹರ್ ಲಾಲ್ ನೆಹರು ಪ್ರತಿಮೆಯನ್ನು ಗುರುವಾರ ತೆಗೆಯಲಾಗಿದೆ.
ಪ್ರತಿಮೆಯನ್ನು ಅಲ್ಲಿಂದ ತೆಗೆದಿರುವುದು ಮಾಜಿ ಪ್ರಧಾನಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಹೇಳಿದೆ.
ನೆಹರು ಪ್ರತಿಮೆಯನ್ನು ಉದ್ದೇಶಪೂರ್ವಕವಾಗಿ ಅಲ್ಲಿಂದ ತೆಗೆಯಲಾಗಿದೆ ಎಂದು ಆರೋಪಿಸಿಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದ್ದರು.ಪ್ರತಿಮೆಯನ್ನು ಅಲ್ಲಿಂದ ತೆಗೆಯುವ ಹೊತ್ತಿಗೆ ಕಾರ್ಯಕರ್ತರು ಕ್ರೇನ್ನ್ನು ತಡೆದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ದ ಘೋಷಣೆ ಕೂಗಿದ್ದಾರೆ.
ನಗರ ಸುಂದರಗೊಳಿಸುವುದಕ್ಕಾಗಿ ನೆಹರು ಪ್ರತಿಮೆಯನ್ನು ತೆಗೆಯುವುದಾದರೆ, ಅದೇ ರಸ್ತೆಯಲ್ಲಿರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಅವರ ಪ್ರತಿಮೆಯನ್ನು ಯಾಕೆ ಮುಟ್ಟಿಲ್ಲ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.ನೆಹರು ಅವರ ಪ್ರತಿಮೆಯನ್ನು ಈಗ ಆನಂದ್ ಭವನ್ ಬಳಿ ಇರುವ ಪಾರ್ಕ್ ನಲ್ಲಿಇರಿಸಲಾಗಿದೆ. ನೆಹರು ಅವರ ತತ್ವಗಳನ್ನು ತಳ್ಳುವ ಸರ್ಕಾರದ ಆಶಯಗಳನ್ನು ನಾವು ಸಹಿಸುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಆದಾಗ್ಯೂ, ಪ್ರತಿಮೆಯನ್ನು ಅಲ್ಲಿಂದ ತೆಗೆದಿರುವುದು ಯಾಕೆ ಎಂಬುದರ ಬಗ್ಗೆ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ.ಕುಂಭಮೇಳಕ್ಕಾಗಿ ರಸ್ತೆ ಅಗಲ ಮಾಡುತ್ತಿದ್ದು, ಪ್ರತಿಮೆ ರಸ್ತೆ ಮಧ್ಯದಲ್ಲಿರುವುದರಿಂದ ಅದನ್ನು ತೆಗೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಆದರೆ ದೀನ್ ದಯಾಳ್ ಪ್ರತಿಮೆಯನ್ನು ಯಾಕೆ ಅಲ್ಲಿಂದ ತೆಗೆದಿಲ್ಲ ಎಂಬುದಕ್ಕೆ ಅಧಿಕಾರಿಗಳು ಪ್ರತಿಕ್ರಯಿಸಲು ನಿರಾಕರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.