ನವದೆಹಲಿ: ಉಷ್ಣ ವಿದ್ಯುತ್ ಸ್ಥಾವರಗಳು, ತಮ್ಮಲ್ಲಿ ಉತ್ಪತ್ತಿಯಾಗುವ ಹಾರು ಬೂದಿಯನ್ನು ಪಾರದರ್ಶಕ ಹರಾಜು ಪ್ರಕ್ರಿಯೆ ಮೂಲಕವೇ ಮಾರಾಟ ಮಾಡಬೇಕು ಎಂದು ಕೇಂದ್ರ ಇಂಧನ ಸಚಿವಾಲಯದ ಸಲಹೆಯನ್ನು ಅನುಸರಿಸಬಾರದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ನಿರ್ದೇಶನ ನೀಡಿದೆ.
ಸಚಿವಾಲಯ ಇದೇ ಫೆಬ್ರುವರಿಯಲ್ಲಿ ನೀಡಿದ ಸಲಹೆಯನ್ನು ನ್ಯಾಯಮಂಡಳಿಯು ಅಮಾನತಿನಲ್ಲಿರಿಸಿದೆ.
‘ಕೇಂದ್ರ ಇಂಧನ ಸಚಿವಾಲಯವು ನ್ಯಾಯಮಂಡಳಿಯ ಹಿಂದಿನ ಆದೇಶವನ್ನು ಉಲ್ಲಂಘಿಸಿದೆ. ಮುಂದಿನ ಆದೇಶದ ವರೆಗೂ ಸಚಿವಾಲಯದ ಸಲಹೆ ಪಾಲಿಸಬಾರದು’ ಎಂದು ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಮತ್ತು ತಜ್ಞ ಸದಸ್ಯ ಆಫ್ರೋಜ್ ಅಹಮದ್ ಅವರಿದ್ದ ಪೀಠವು ಹೇಳಿದೆ. ಸಚಿವಾಲಯದ ಸಲಹೆಯನ್ನು ಪ್ರಶ್ನಿಸಿ ಅಮರಾವತಿ ಫ್ಲೈ ಆ್ಯಶ್ ಬ್ರಿಕ್ಸ್ ಮ್ಯಾನುಫ್ಯಾಕ್ಚರರ್ಸ್ ಸಂಸ್ಥೆಯು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿತ್ತು.
ಉಷ್ಣ ವಿದ್ಯುತ್ ಸ್ಥಾವರಗಳಿಗೆ 2021ರ ಸೆಪ್ಟೆಂಬರ್ನಲ್ಲೂ ಸಚಿವಾಲಯ ಇಂಥದ್ದೇ ಸಲಹೆ ನೀಡಿತ್ತು. ಈ ಕುರಿತು 2022ರ ಜನವರಿ 18ರಂದು ಆದೇಶ ನೀಡಿದ್ದ ನ್ಯಾಯಮಂಡಳಿ, ‘ಪರಿಸರಕ್ಕೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿ ಆಗದಂತೆ ಬೂದಿಯನ್ನು ಸಂಗ್ರಹಿಸಿ ಇಡುವ ವ್ಯವಸ್ಥೆ ಖರೀದಿದಾರರಲ್ಲಿ ಇಲ್ಲ. ಹಾರಾಜಿನ ಮೂಲಕ ಬೂದಿಯನ್ನು ಮಾರುವ ಸಲಹೆಯು ಬುದ್ಧಿಹೀನ. ಉತ್ತಮ ಬೂದಿ ಸಂಗ್ರಹಣ ವ್ಯವಸ್ಥೆ ಇರುವ ಖರೀದಿದಾರರಿಗೆ ಉಚಿತವಾಗಿ ನೀಡಿ’ ಎಂದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.