ADVERTISEMENT

ಕಾಶ್ಮೀರದಲ್ಲಿ ನಾಗರಿಕರ ಹತ್ಯೆ: ತನಿಖೆ ಹೊಣೆ ಎನ್‌ಐಎಗೆ ವಹಿಸುವ ಸಾಧ್ಯತೆ

ಐಎಎನ್ಎಸ್
Published 19 ಅಕ್ಟೋಬರ್ 2021, 10:45 IST
Last Updated 19 ಅಕ್ಟೋಬರ್ 2021, 10:45 IST
ಸಾಂದರ್ಭಿಕ ಚಿತ್ರ – ಎಎಫ್‌ಪಿ
ಸಾಂದರ್ಭಿಕ ಚಿತ್ರ – ಎಎಫ್‌ಪಿ   

ನವದೆಹಲಿ: ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದಿರುವ ನಾಗರಿಕರ ಹತ್ಯೆಯ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದನೆಯ ಆಯಾಮವನ್ನು ಮುಂದಿಟ್ಟುಕೊಂಡು ತನಿಖೆ ನಡೆಯುವ ನಿರೀಕ್ಷೆ ಇದೆ.

ಸೋಮವಾರ ನಡೆದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ ಸಮಾವೇಶದಲ್ಲಿಯೂ ಕಾಶ್ಮೀರ ವಿಚಾರ ಚರ್ಚೆಯಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದಾರೆ ಎಂದೂ ಮೂಲಗಳು ಹೇಳಿವೆ.

ನಾಗರಿಕರ ಹತ್ಯೆಯಿಂದಾಗಿ ವಲಸಿಗರು ಕಾಶ್ಮೀರ ತೊರೆಯುತ್ತಿರುವುದಲ್ಲದೆ ಸ್ಥಳೀಯರೂ ಭೀತಿಗೆ ಒಳಗಾಗುವಂತಾಗಿದೆ. ಸರ್ಕಾರವು ಕೈಗೊಂಡ ಕ್ರಮಗಳಿಂದ ಕಾಶ್ಮೀರಕ್ಕೆ ಮರಳಲು ಬಯಸಿರುವ ಕಾಶ್ಮೀರಿ ಪಂಡಿತ ಸಮುದಾಯದವರಲ್ಲಿಯೂ ಆತಂಕಕ್ಕೆ ಕಾರಣವಾಗಿದೆ ಎಂದೂ ಮೂಲಗಳು ಹೇಳಿವೆ.

ಎನ್ಐಎಯ ಸ್ಥಳೀಯ ತಂಡವು ಈಗಾಗಲೇ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ತನಿಖೆಗೆ ನೆರವಾಗುತ್ತಿದೆ. ಹತ್ಯೆಯ ಹಿಂದಿರುವ ಸಂಚುಕೋರರ ಬಗ್ಗೆ ಮಾಹಿತಿ ಕಲೆಹಾಕಲು ಯತ್ನಿಸುತ್ತಿದೆ ಎನ್ನಲಾಗಿದೆ.

ಕಳೆದ 16 ದಿನಗಳಲ್ಲಿ ಇತರ ರಾಜ್ಯಗಳಿಂದ ಬಂದ 11 ಮಂದಿಯನ್ನು ಕಾಶ್ಮೀರದಲ್ಲಿ ಉಗ್ರರು ಹತ್ಯೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.