ನವದೆಹಲಿ: ಮಾದಕ ವಸ್ತುಗಳ ಕಳ್ಳಸಾಗಣೆ ಜಾಲ, ಉಗ್ರರು ಹಾಗೂ ಗ್ಯಾಂಗ್ಸ್ಟರ್ಗಳ ನಡುವಿನ ನಂಟು ಕುರಿತ ಪ್ರಕರಣಗಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಆರು ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಶೋಧ ನಡೆಸಿದ್ದಾರೆ.
ಉಗ್ರ ಸಂಘಟನೆಗಳು ಹಾಗೂ ಅವರ ಬಗ್ಗೆ ಸಹಾನುಭೂತಿ ಹೊಂದಿರುವ ವಿದೇಶಿದಲ್ಲಿನ ಗುಂಪುಗಳ ಸದಸ್ಯರು ಉತ್ತರದ ರಾಜ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಕೆಲವರನ್ನು ಗುರಿಯಾಗಿಸಿ ಹತ್ಯೆ ಮಾಡುವುದು ಹಾಗೂ ಹಿಂಸಾಚಾರದಲ್ಲಿ ತೊಡಗಿರುವ ಕುರಿತು ಎನ್ಐಎ ಕಳೆದ ವರ್ಷ ಮೂರು ಪ್ರಕರಣಗಳನ್ನು ದಾಖಲಿಸಿತ್ತು. ಈ ಪ್ರಕರಣಗಳ ಹಿನ್ನೆಲೆಯಲ್ಲಿ ಶೋಧ ಕೈಗೊಳ್ಳಲಾಗಿದೆ.
ಈ ಜಾಲವು ಉಗ್ರರಿಗೆ ಬೇಕಾದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ಕಚ್ಚಾ ಬಾಂಬ್ಗಳನ್ನು ಕೂಡ ಕಳ್ಳಸಾಗಣೆ ಮಾಡುತ್ತಿತ್ತು. ಶಸ್ತ್ರಾಸ್ತ್ರಗಳ ಉತ್ಪಾದಕರು, ಪೂರೈಕೆದಾರರು ಹಾಗೂ ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುವವರ ಜಾಲದ ಮೂಲಕ ಈ ಕಾರ್ಯ ನಡೆಯುತ್ತಿತ್ತು ಎಂಬ ಮಾಹಿತಿಯೂ ಎನ್ಐಎ ತನಿಖೆ ವೇಳೆ ಬಹಿರಂಗಗೊಂಡಿತ್ತು.
ಕೆನಡಾ ಮೂಲದ ಆರ್ಷ್ ದಲ್ಲಾನನ್ನು ಕಳೆದ ಜನವರಿಯಲ್ಲಿ ಗೃಹ ಸಚಿವಾಲಯವು ‘ಉಗ್ರ’ ಎಂಬುದಾಗಿ ಘೋಷಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.