ADVERTISEMENT

ಕೊಯಮತ್ತೂರು ಕಾರು ಸ್ಫೋಟ ಪ್ರಕರಣ ಎನ್ಐಎಗೆ ಹಸ್ತಾಂತರ: ಎಫ್ಐಆರ್ ದಾಖಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2022, 13:57 IST
Last Updated 27 ಅಕ್ಟೋಬರ್ 2022, 13:57 IST
ರಾಷ್ಟ್ರೀಯ ತನಿಖಾ ದಳ
ರಾಷ್ಟ್ರೀಯ ತನಿಖಾ ದಳ   

ಕೊಯಮತ್ತೂರು (ತಮಿಳುನಾಡು): ಕೊಯಮತ್ತೂರಿನ ಉಕ್ಕಡಂ ದೇವಾಲಯದ ಬಳಿ ಕಾರಿನಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸ್ಫೋಟಗೊಂಡ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಹಸ್ತಾಂತರಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್‌ ದಾಖಲಿಸಿಕೊಂಡಿರುವ ಎನ್‌ಐಎ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

‘ಸ್ಫೋಟ ಸಂಭವಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರನ್ನು ಗುರುತಿಸಿದ್ದು, ಕೆಲವೇ ದಿನಗಳಲ್ಲಿ ದುರಂತಕ್ಕೆ ಕಾರಣವಾದ ಸತ್ಯಾಂಶಗಳನ್ನು ಬಹಿರಂಗಪಡಿಸುತ್ತೇವೆ. ಈಗಾಗಲೇ ಆರು ಮಂದಿಯನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಜತೆಗೆ ಪ್ರಕರಣವನ್ನು ಎನ್ಐಎಗೆ ಶಿಫಾರಸು ಮಾಡಲಾಗಿದೆ’ ಎಂದು ಡಿಜಿಪಿ ಸೈಲೇಂದ್ರ ಬಾಬು ತಿಳಿಸಿದ್ದಾರೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರಗೆ ಆರು ಮಂದಿಯನ್ನು ಬಂಧಿಸಿದ್ದು, ಅವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತರನ್ನು ಮೊಹಮ್ಮದ್ ಅಜರುದ್ದೀನ್ (25), ಮೊಹಮ್ಮದ್ ರಿಯಾಜ್ (27), ಮೊಹಮ್ಮದ್ ತಲ್ಕಾ (25), ಮೊಹಮ್ಮದ್ ನವಾಜ್ ಇಸ್ಮಾಯಿಲ್(27) ಮತ್ತು ಫಿರೋಜ್ ಇಸ್ಮಾಯಿಲ್ (27) ಎಂದು ಗುರುತಿಸಲಾಗಿದೆ.

ಸ್ಫೋಟದಲ್ಲಿ ಸಾವನ್ನಪ್ಪಿರುವ ಜೆಮಿಶಾ ಮುಬಿನ್ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಘಟನೆಯ ಹಿಂದೆ ಭಯೋತ್ಪಾದನಾ ಕೃತ್ಯದ ಸಂಚು ಇದೆಯಾ ಎಂಬುದರ ಕುರಿತೂ ತನಿಖೆ ನಡೆಯುತ್ತಿದೆ’ ಎಂದು ಕೊಯಮತ್ತೂರಿನ ಪೊಲೀಸ್‌ ಕಮಿಷನರ್‌ ವಿ. ಬಾಲಕೃಷ್ಣನ್‌ ತಿಳಿಸಿದ್ದಾರೆ.

ಅಡುಗೆ ಅನಿಲ ಸಿಲಿಂಡರ್‌ ಮತ್ತು ಇತರ ವಸ್ತುಗಳನ್ನು ಕಾರಿನಲ್ಲಿರಿಸಲು ಆರೋಪಿಗಳು ಮುಬಿನ್‌ಗೆ ಸಹಾಯ ಮಾಡಿದ್ದರು. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದೂ ಅವರು ವಿವರಿಸಿದ್ದಾರೆ.

ಪೊಟ್ಯಾಸಿಯಂ ನೈಟ್ರೇಟ್‌, ಅಲ್ಯುಮೀನಿಯಂ ಪೌಡರ್‌ ಮೊದಲಾದ ವಸ್ತುಗಳು ಕಾರಿನಲ್ಲಿ ಪತ್ತೆಯಾಗಿದ್ದವು ಎಂದಿದ್ದಾರೆ.

ಶ್ರೀಲಂಕಾದಲ್ಲಿ ಈಸ್ಟರ್‌ ದಿನದಂದು ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮೃತ ಮುಬಿನ್‌ ಸೇರಿದಂತೆ ಐದು ಮಂದಿಯನ್ನು 2019ರಲ್ಲಿ ರಾಷ್ಟ್ರೀಯ ತನಿಖಾ ದಳ ವಿಚಾರಣೆಗೆ ಒಳಪಡಿಸಿತ್ತು. ಸಿಲಿಂಡರ್‌ ಸ್ಫೋಟದ ಬಳಿಕ ಪೊಲೀಸರು ಮುಬಿನ್‌ ಮನೆಯಲ್ಲಿ ಶೋಧ ನಡೆಸಿದಾಗ ಸ್ಫೋಟಕ ವಸ್ತುಗಳು ಲಭಿಸಿವೆ ಎಂದೂ ಹೇಳಿದ್ದಾರೆ.

ಇದೊಂದು ‘ಆತ್ಮಾಹುತಿ ದಾಳಿ’ ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.