ನವದೆಹಲಿ: 17ನೇ ಲೋಕಸಭೆಯಲ್ಲಿ ಐದು ವರ್ಷಗಳಲ್ಲಿ 1,354 ಗಂಟೆ ಕಲಾಪ ನಡೆದಿದೆ. ಈ ಅವಧಿಯಲ್ಲಿ ಕರ್ನಾಟಕದ ನಾಲ್ವರು ಸೇರಿದಂತೆ ಒಂಬತ್ತು ಸದಸ್ಯರು ಒಂದು ಮಾತೂ ಆಡಿಲ್ಲ, ಚರ್ಚೆಯಲ್ಲೂ ಭಾಗವಹಿಸಿಲ್ಲ.
ಲೋಕಸಭೆಯ ಕಲಾಪದ ವೇಳೆ ‘ಮೌನವಹಿಸಿದ್ದ’ ಕರ್ನಾಟಕದ ಈ ನಾಲ್ವರು ಸದಸ್ಯರೆಂದರೆ –ಬಿ.ಎನ್.ಬಚ್ಚೇಗೌಡ, ಅನಂತಕುಮಾರ್ ಹೆಗಡೆ, ವಿ.ಶ್ರೀನಿವಾಸಪ್ರಸಾದ್ ಹಾಗೂ ರಮೇಶ್ ಜಿಗಜಿಣಗಿ.
ಶತ್ರುಘ್ನ ಸಿನ್ಹಾ, ಸನ್ನಿ ಡಿಯೋಲ್, ಅತುಲ್ ರೈ, ಪ್ರಧಾನ್ ಬರುಅ ಮತ್ತು ದಿಬ್ಯೇಂದು ಅಧಿಕಾರಿ ಈ ಪಟ್ಟಿಯಲ್ಲಿ ಇರುವ ಇತರೆ ಸದಸ್ಯರು ಎಂದು ಲೋಕಸಭೆ ಸಚಿವಾಲಯದ ಮೂಲಗಳು ತಿಳಿಸಿವೆ.
ಪಟ್ಟಿಯಲ್ಲಿ ಇರುವ ಒಂಬತ್ತು ಜನರಲ್ಲಿ ಮೂವರು ಕನಿಷ್ಠ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಉಳಿದ ಆರು ಮಂದಿ ಕನಿಷ್ಠ ಒಂದು ಅವಕಾಶ ಬಳಸಿಕೊಂಡಿದ್ದಾರೆ.
ಕರ್ನಾಟಕದ ರಮೇಶ್ ಜಿಗಜಿಣಗಿ ಅವರು ಪ್ರಶ್ನೆಯನ್ನು ಕೇಳಿಲ್ಲ, ಕಲಾಪದಲ್ಲಿ ಮಂಡಿಸಲು ಪ್ರಶ್ನೆ ಕಳುಹಿಸಿಲ್ಲ. ಇತರ ಮೂವರು ಚರ್ಚೆಯಲ್ಲಿ ಪಾಲ್ಗೊಳ್ಳದಿದ್ದರೂ ಕಲಾಪದಲ್ಲಿ ಭಾಗವಹಿಸಿದ್ದರು.
ಈ ಒಂಬತ್ತು ಸಂಸದರದಲ್ಲಿ ಆರು ಮಂದಿ ಬಿಜೆಪಿಯವರು. ಇಬ್ಬರು ತೃಣಮೂಲ ಕಾಂಗ್ರೆಸ್ ಮತ್ತು ಒಬ್ಬರು ಬಿಎಸ್ಪಿ ಪಕ್ಷದ ಸದಸ್ಯರು.
ಸಚಿವಾಲಯದ ಅಂಕಿ ಅಂಶದ ಪ್ರಕಾರ, 17ನೇ ಲೋಕಸಭೆಯಲ್ಲಿ 222 ಮಸೂದೆಗಳಿಗೆ ಅಂಗೀಕಾರ ದೊರೆತಿದೆ. 1,116 ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದ್ದಾರೆ. ಶೂನ್ಯವೇಳೆಯಲ್ಲಿ 5,568 ವಿಷಯಗಳು ಪ್ರಸ್ತಾಪವಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.