ADVERTISEMENT

ಈಶಾನ್ಯ ದೆಹಲಿ ಗಲಭೆ: ‘ಜೈ ಶ್ರೀರಾಮ್’ ಎನ್ನಲು ಬಲವಂತ

ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ ದೆಹಲಿ ಪೊಲೀಸರು

ಪಿಟಿಐ
Published 3 ಜುಲೈ 2020, 15:36 IST
Last Updated 3 ಜುಲೈ 2020, 15:36 IST
ಗಲಭೆ ನಡೆದಿದ್ದ ಭಗೀರತಿ ವಿಹಾರ್‌ ಪ್ರದೇಶ 
ಗಲಭೆ ನಡೆದಿದ್ದ ಭಗೀರತಿ ವಿಹಾರ್‌ ಪ್ರದೇಶ    

ನವದೆಹಲಿ: ಕಳೆದ ಫೆಬ್ರುವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮುಗಲಭೆಯಲ್ಲಿ,ಗಲಭೆಕೋರರು ವಾಟ್ಸ್‌ಆ್ಯಪ್‌ ಗ್ರೂಪ್‌ ಮುಖಾಂತರ ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತಿದ್ದರು ಹಾಗೂ‘ಜೈ ಶ್ರೀರಾಮ್‌’ ಎನ್ನಲು ನಿರಾಕರಿಸಿದ 9 ಮುಸ್ಲಿಮರನ್ನು ಕೊಂದಿದ್ದರು ಎಂದುಇಲ್ಲಿನ ನ್ಯಾಯಾಲಯವೊಂದಕ್ಕೆ ದೆಹಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.

ಆರೋಪಿಗಳು ‘ಕಟ್ಟರ್‌ ಹಿಂದುತ್‌ ಏಕ್ತಾ’ ಹೆಸರಿನ ವಾಟ್ಸ್‌ಆ್ಯಪ್‌ ಗ್ರೂಪ್‌ನ ಭಾಗವಾಗಿದ್ದರು. ಮುಸ್ಲಿಮರ ವಿರುದ್ಧ ‘ಪ್ರತೀಕಾರ’ಕ್ಕೆ ಈ ಗ್ರೂಪ್‌ ಅನ್ನು ಫೆಬ್ರುವರಿ 25ರಂದು ಸೃಷ್ಟಿಸಲಾಗಿತ್ತು. ಗಲಭೆಗೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಪೂರೈಸಲು ಈ ಗ್ರೂಪ್‌ ಮುಖಾಂತರ ಮಾಹಿತಿ ಹಂಚಿಕೊಳ್ಳಲಾಗುತ್ತಿತ್ತು ಎಂದು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ವಿನೋದ್‌ ಕುಮಾರ್‌ ಅವರ ಮುಂದೆ ಸಲ್ಲಿಸಲಾದಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಗ್ರೂಪ್‌ ರಚಿಸಿದಾತ ತಲೆಮರೆಸಿಕೊಂಡಿದ್ದಾರೆ. ಗ್ರೂಪ್‌ ಪ್ರಾರಂಭಿಸಿದಾಗ ಇದರಲ್ಲಿ 125 ಸದಸ್ಯರು ಇದ್ದರು. ಈ ಪೈಕಿ ಮಾರ್ಚ್‌ 8ರೊಳಗೆ 47 ಜನರು ಗ್ರೂಪ್‌ನಿಂದ ಹೊರಹೋಗಿದ್ದರು ಎಂದು ತಿಳಿಸಲಾಗಿದೆ.

ADVERTISEMENT

‘ತನಿಖೆ ಸಂದರ್ಭದಲ್ಲಿ ಆರೋಪಿಗಳು‌ ಹಾಗೂ ಇತರೆ ಗಲಭೆಕೋರರು ಫೆಬ್ರುವರಿ 25 ಮತ್ತು 26ರ ರಾತ್ರಿ ಗಂಗಾ ವಿಹಾರ್‌, ಭಗೀರತಿ ವಿಹಾರ್‌ ಪ್ರದೇಶದಲ್ಲಿ 9 ಮುಸ್ಲಿಮರನ್ನು ಕೊಂದು, ಹಲವು ಜನರನ್ನು ಥಳಿಸಿದ್ದರು. ಈ ಆರೋಪಿಗಳು ಗಲಭೆಯಲ್ಲಿ ಸಕ್ರಿಯರಾಗಿದ್ದರು ಹಾಗೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಜನರನ್ನು ನಿಲ್ಲಿಸಿ, ಅವರ ಹೆಸರು , ವಿಳಾಸ ಕೇಳಿಕೊಂಡು ಗುರುತಿನ ಚೀಟಿ ಪಡೆದು ‘ಜೈ ಶ್ರೀರಾಮ್‌’ ಎನ್ನಲು ಬಲವಂತ ಮಾಡುತ್ತಿದ್ದರು. ಈ ರೀತಿ ಹೇಳಲು ನಿರಾಕರಿಸಿದವರನ್ನು ಹಾಗೂ ಮುಸ್ಲಿಮರನ್ನು ಥಳಿಸಿ, ಚರಂಡಿಗೆ ಎಸೆದಿದ್ದರು’ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಜುಲೈ 13ರಂದು ಈ ಕುರಿತು ವಿಚಾರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.