ADVERTISEMENT

ನಿರ್ಭಯಾ ಪ್ರಕರಣ: ಅಪರಾಧಿ ಪವನ್‌ ಗುಪ್ತಾಗೆ ವಕೀಲರ ನೆರವು ನೀಡಲಿದೆ ಕೋರ್ಟ್‌

ಪಿಟಿಐ
Published 12 ಫೆಬ್ರುವರಿ 2020, 14:07 IST
Last Updated 12 ಫೆಬ್ರುವರಿ 2020, 14:07 IST
   

ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ನಾಲ್ವರಲ್ಲಿ ಒಬ್ಬನಾದ ಪವನ್ ಗುಪ್ತಾ ಪರಿಹಾರಾತ್ಮಕ (ಕ್ಯುರೇಟಿವ್) ಅರ್ಜಿ ಸಲ್ಲಿಸುವಲ್ಲಿ ವಿಳಂಬ ಮಾಡುತ್ತಿರುವ ಕುರಿತು ದೆಹಲಿಯ ಸೆಷನ್ಸ್ ನ್ಯಾಯಾಲಯ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.

ಮೊದಲಿನ ವಕೀಲರನ್ನು ಕೈಬಿಟ್ಟಿರುವುದರಿಂದ ಹೊಸ ವಕೀಲರ ನೇಮಕಕ್ಕೆ ಸಮಯ ಬೇಕು ಎಂದು ಪವನ್ ನ್ಯಾಯಾಲಯಕ್ಕೆ ತಿಳಿಸಿದ. ಇದು ತಿಳಿದ ಬಳಿಕ ವಕೀಲರ ನೆರವು ಒದಗಿಸುವುದಾಗಿ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಧರ್ಮೇಂದ್ರ ರಾಣಾ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (ಡಿಎಲ್‌ಎಸ್‌ಎ) ವಕೀಲರ ಪಟ್ಟಿಯನ್ನು ಪವನ್‌ ತಂದೆಗೆ ನೀಡಿದ್ದು, ವಕೀಲರನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದೆ.

ADVERTISEMENT

ವಸ್ತುಸ್ಥಿತಿ ವರದಿ ಸಲ್ಲಿಕೆ: ಈ ಮೊದಲು ಗಲ್ಲುಶಿಕ್ಷೆ ಜಾರಿಗೆ ಜ.22ರಂದು ದಿನ ನಿಗದಿಪಡಿಸಲಾಗಿತ್ತು. ಜ.17ರಂದು ವಿಚಾರಣಾ ನ್ಯಾಯಾಲಯ ತಡೆ ನೀಡಿದ ಬಳಿಕ ಇದನ್ನು ಫೆ.1ಕ್ಕೆ ಮುಂದೂಡಲಾಗಿತ್ತು. ನಂತರ ‘ಮುಂದಿನ ಆದೇಶದವರೆಗೆ ಗಲ್ಲುಶಿಕ್ಷೆ ಜಾರಿಗೆ ತಡೆಯಾಜ್ಞೆ’ ವಿಧಿಸಲಾಗಿದೆ ಎಂದು ಜ.31ರಂದು ನ್ಯಾಯಾಲಯ ತೀರ್ಪು ನೀಡಿತ್ತು.

ಈ ಸಂಬಂಧ ಫೆ.5ರಂದು ಆದೇಶ ನೀಡಿದ್ದ ದೆಹಲಿ ಹೈಕೋರ್ಟ್‌, ಮುಂದಿನ ಏಳು ದಿನಗಳಲ್ಲಿ ಅಪರಾಧಿಗಳು ಪರಿಹಾರಾತ್ಮಕ ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು. ಆದರೆ ಈ ಅವಧಿಯಲ್ಲಿ ನಾಲ್ವರು ಅಪರಾಧಿಗಳಲ್ಲಿ ಒಬ್ಬರೂ ಸಹ ಅರ್ಜಿ ಸಲ್ಲಿಸಿಲ್ಲ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಮಂಗಳವಾರ ವಿಚಾರಣಾ ನ್ಯಾಯಾಲಯಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸಿದ್ದಾರೆ.

ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಜಾರಿಗೊಳಿಸಲು ಹೊಸದಾಗಿ ವಾರಂಟ್ ಹೊರಡಿಸಬೇಕು ಎಂದು ಕೋರಿ ನಿರ್ಭಯಾ ಪೋಷಕರು ಹಾಗೂ ದೆಹಲಿ ಸರ್ಕಾರದಿಂದ ಮಂಗಳವಾರವಷ್ಟೆ ದೆಹಲಿ ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.