ಚಂಡಿಗಡ: ಮತದಾನ ಜಾಗೃತಿ ಕುರಿತ ಫ್ಲೆಕ್ಸ್ನಲ್ಲಿ ನಿರ್ಭಯಾ ಪ್ರಕರಣದ ಅಪರಾಧಿ ಮುಕೇಶ್ ಸಿಂಗ್ ಚಿತ್ರವನ್ನು ಮುದ್ರಿಸುವ ಮೂಲಕ ಪಂಜಾಬ್ನ ಚುನಾವಣಾ ಆಯೋಗ ತೀವ್ರ ಮುಜುಗರಕ್ಕೆ ಒಳಗಾಗಿದೆ.
ಹೋಶಿಯಾರ್ಪುರದ ಜಿಲ್ಲಾಡಳಿತ ಸಂಕೀರ್ಣದಲ್ಲಿ ಅಳವಡಿಸಿದ್ದ ಮತದಾನ ಜಾಗೃತಿ ಫ್ಲೆಕ್ಸ್ಗಳಲ್ಲಿ ಗಣ್ಯರ ಚಿತ್ರಗಳ ಜೊತೆ ಅಪರಾಧಿಯ ಚಿತ್ರವೂ ಮುದ್ರಣಗೊಂಡಿದೆ.
ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬರು ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿದ ಬಳಿಕ ಆಗಿರುವ ಅಚಾತುರ್ಯವು ಬೆಳಕಿಗೆ ಬಂದಿದೆ. ಈ ಫ್ಲೆಕ್ಸ್ಗಳನ್ನು ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಥಳೀಯ ಚುನಾವಣಾ ಕಚೇರಿಯು ಅಳವಡಿಸಿತ್ತು. ವಿಚಿತ್ರವೆಂದರೆ, ಈವರೆಗೂ ಯಾರ ಗಮನಕ್ಕೂ ಬಂದಿರಲಿಲ್ಲ.
‘ಮತಜಾಗೃತಿ ಅಭಿಯಾನದಲ್ಲಿ ಅಪರಾಧಿಯೊಬ್ಬನ ಚಿತ್ರ ತಿಂಗಳುಗಟ್ಟಲೆ ಪ್ರದರ್ಶನವಾಗಿದ್ದು ದುರದೃಷ್ಟಕರ. ಹೀನ ಕೃತ್ಯ ಎಸಗಿದ ಅಪರಾಧಿಯನ್ನುಸರ್ಕಾರದ ಖರ್ಚಿನಲ್ಲಿ ಪ್ರಮುಖ ಸ್ಥಾನದಲ್ಲಿ ಚಿತ್ರಿಸಲಾಗಿದೆ. ಈ ಮೂಲಕ ಜನರಿಗೆ ನೀಡಿದ್ದ ಸಂದೇಶವೇನು? ಯಾರೂ ಇದನ್ನು ಗಮನಿಸಿಲ್ಲವೇಕೆ’ ಎಂದು ಇದನ್ನು ಮೊದಲು ಗುರುತಿಸಿದ್ದ ಸೋರವ್ ಸಿಂಗ್ ಎಂಬುವರು ಪ್ರಶ್ನಿಸಿದ್ದಾರೆ.
ತನಿಖೆಗೆ ಆದೇಶ:ಈ ಬಗ್ಗೆ ತನಿಖೆ ನಡೆಸುವಂತೆ ಹೋಶಿಯಾರ್ಪುರ ಜಿಲ್ಲಾಧಿಕಾರಿ ಇಶಾ ಕಾಲಿಯಾ ಆದೇಶಿಸಿದ್ದಾರೆ. ಎಲ್ಲ ಫ್ಲೆಕ್ಸ್ಗಳನ್ನು ತೆರವುಗೊಳಿಸಲಾಗಿದೆ. ಅಂತರ್ಜಾಲದಿಂದ ಡೌನ್ಲೋಡ್ ಮಾಡಿ ಬಳಸಿಕೊಳ್ಳುವಾಗ ಅದನ್ನು ಗಮನಿಸದೇ, ಸಂಬಂಧಿಸಿದ ಪ್ರಾಧಿಕಾರಗಳು ವಹಿಸಿದ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರಲ್ಲಿ ಅಚ್ಚರಿ ವ್ಯಕ್ತವಾಗಿದೆ.
2012ರ ಡಿಸೆಂಬರ್ನಲ್ಲಿ ದೆಹಲಿಯಲ್ಲಿ ಚಲಿಸುವ ಬಸ್ನಲ್ಲಿ ಆರು ದುಷ್ಕರ್ಮಿಗಳು ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ತೀವ್ರ ಗಾಯಗೊಂಡಿದ್ದ ನಿರ್ಭಯಾ ಆ ಬಳಿಕ ಮೃತಪಟ್ಟಿದ್ದರು. ಈ ಘಟನೆ ದೇಶದಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.