ADVERTISEMENT

ನಿರ್ಭಯಾ ಅತ್ಯಾಚಾರ ಅಪರಾಧಿಗಳ ಗಲ್ಲಿಗೇರಿಸಲು ನಡೆಯುತ್ತಿದೆ ತ್ವರಿತ ಸಿದ್ಧತೆ

ತಿಹಾರ್ ಜೈಲಿನಲ್ಲಿ ತಯಾರಿ * ಜನವರಿ 22ಕ್ಕೆ ಬೆಳಿಗ್ಗೆ 7 ಗಂಟೆಗೆ ಗಲ್ಲು

ಏಜೆನ್ಸೀಸ್
Published 13 ಜನವರಿ 2020, 5:27 IST
Last Updated 13 ಜನವರಿ 2020, 5:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಸಿದ್ಧತೆ ಆರಂಭವಾಗಿದೆ. ಅಪರಾಧಿಗಳನ್ನು ಇದೇ 22ರಂದುಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ಪಟಿಯಾಲಹೌಸ್ ನ್ಯಾಯಾಲಯ ಇತ್ತೀಚೆಗೆ ವಾರಂಟ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಜೈಲು ಅಧಿಕಾರಿಗಳು ಸಿದ್ಧತೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಅಪರಾಧಿಗಳ ಪೈಕಿ ಇಬ್ಬರು ಸುಪ್ರೀಂ ಕೋರ್ಟ್‌ಗೆ ಪರಿಹಾರಾತ್ಮ ಅರ್ಜಿ ಸಲ್ಲಿಸಿದ್ದು, ಮಂಗಳವಾರ ವಿಚಾರಣೆಗೆ ಬರಲಿದೆ. ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.

ಏಕಕಾಲಕ್ಕೆ ಇಬ್ಬರನ್ನು ಮಾತ್ರವೇ ಗಲ್ಲಿಗೇರಿಸಲು ಸಾಧ್ಯವಿದ್ದ ತಿಹಾರ್ ಜೈಲಿನಲ್ಲಿ ಈಗ ನಾಲ್ವರನ್ನು ಗಲ್ಲಿಗೇರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಮರಣದಂಡನೆಗೆ ಗುರಿಯಾದ ನಾಲ್ವರನ್ನು ಏಕಕಾಲದಲ್ಲಿ ಗಲ್ಲಿಗೇರಿಸುತ್ತಿರುವುದು ದೇಶದ ಇತಿಹಾಸದಲ್ಲೇ ಇದೇ ಮೊದಲು.

ನಾಲ್ವರು ಅಪರಾಧಿಗಳ ದೇಹದ ತೂಕದ ಬಗ್ಗೆ ಈಗಾಗಲೇ ಮಾಹಿತಿ ಪಡೆದುಕೊಂಡಿರುವ ಜೈಲು ಅಧಿಕಾರಿಗಳು ಅದೇ ತೂಕದ ಮರಳಿನ ಚೀಲಗಳು ಮತ್ತು ಕಳೆದ ತಿಂಗಳು ತರಿಸಿಕೊಳ್ಳಲಾದ ಹೊಸ ಹಗ್ಗಗಳಿಂದ ನೇಣಿಗೇರಿಸುವ ಅಣಕು ಕಾರ್ಯಾಚರಣೆ ನಡೆಸಿದ್ದಾರೆ. ನೇಣಿಗೇರಿಸಲು ಬೇಕಾಗಿರುವ ಹಗ್ಗಗಳನ್ನು ಬಿಹಾರದ ಬಕ್ಸಾರ್ ಜೈಲಿನಲ್ಲಿ ಸಿದ್ಧಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.