ADVERTISEMENT

ನಿರ್ಭಯಾ ಪ್ರಕರಣ| ತೀರ್ಪು ಮರುಪರಿಶೀಲನೆ ಕೋರಿದ್ದ ಅರ್ಜಿಯಿಂದ ಹಿಂದೆ ಸರಿದ ಸಿಜೆಐ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 18:18 IST
Last Updated 17 ಡಿಸೆಂಬರ್ 2019, 18:18 IST
   

ದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ಅಪರಾಧಿ ಅಕ್ಷಯ್‌ ಕುಮಾರ್ ಸಿಂಗ್‌ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಹಿಂದೆ ಸರಿದಿದ್ದಾರೆ.

‘ಸುಪ್ರೀಂ’ 2017ರಲ್ಲಿ ನೀಡಿದ್ದ ಗಲ್ಲು ಶಿಕ್ಷೆ ತೀರ್ಪಿನ ಮರು ಪರಿಶೀಲನೆ ಕೋರಿ ಅಪರಾಧಿ ಅರ್ಜಿ ಸಲ್ಲಿಸಿದ್ದ. ಇದರವಿಚಾರಣೆಯನ್ನು ಮತ್ತೊಂದು ಪೀಠನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಶೇಷ ಪೀಠ ಸ್ಪಷ್ಟಪಡಿಸಿತು. ನ್ಯಾಯಮೂರ್ತಿಗಳಾದ ಆರ್.ಭಾನುಮತಿ, ಅಶೋಕ್‌ ಭೂಷಣ್‌ ವಿಶೇಷ ಪೀಠದ ಇತರೆ ಸದಸ್ಯರು.

ಈ ಪ್ರಕರಣದಲ್ಲಿ ಸಂತ್ರಸ್ತೆ ತಾಯಿಯ ಪರವಾಗಿ ನನ್ನ ಸಂಬಂಧಿಯೊಬ್ಬರು ಹಾಜರಾಗಿದ್ದರು. ಬಹುಶಃ ಈ ಅರ್ಜಿಯ ವಿಚಾರಣೆಯನ್ನು ಇನ್ನೊಂದು ಪೀಠ ನಡೆಸುವುದೇ ಸೂಕ್ತ ಎಂದು ಬೊಬಡೆ ಅಭಿಪ್ರಾಯಪಟ್ಟರು.

ADVERTISEMENT

ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್, ‘ದೆಹಲಿಯಲ್ಲಿ ವಾಯು ಮತ್ತು ಜಲಮಾಲಿನ್ಯ ಹೆಚ್ಚುತ್ತಿದೆ. ಜೀವಿತಾವಧಿಯೂ ಕುಗ್ಗುತ್ತಿದೆ’ ಎಂದು ವಾದ ಮಂಡಿಸಿ‌ ಕ್ಷಮೆ ಕೋರಿದ್ದ. ಜುಲೈ ತಿಂಗಳು ಇತರೆ ಮೂವರು ಅಪರಾಧಿಗಳು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು.

ಅಕ್ಷಯ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಮುಖ್ಯನ್ಯಾಯಮೂರ್ತಿ ಎಸ್‌.ಎ ಬೋಬಡೆ, ಅಶೋಕ್‌ ಭೂಷಣ್‌ ಮತ್ತು ಆರ್‌ ಭಾನುಮತಿ ಅವರಿದ್ದ ಪೀಠ ಆರಂಭಿಸಿತು. ವಿಚಾರಣೆ ಶುರುವಿನಲ್ಲೇ ಮುಖ್ಯನ್ಯಾಯಮೂರ್ತಿ ಬೋಬಡೆ ಅವರು ವೈಯಕ್ತಿಕ ಕಾರಣಗಳಿಂದ ತಾವು ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದರು.

ಈ ಅರ್ಜಿಯ ವಿಚಾರಣೆಗೆ ಬುಧವಾರ (ಡಿ.18) ಬೆಳಗ್ಗೆ 10.30ಕ್ಕೆ ಹೊಸ ಪೀಠ ರಚನೆ ಮಾಡುವುದಾಗಿ ಮುಖ್ಯನ್ಯಾಯಮೂರ್ತಿಗಳು ತಿಳಿಸಿದರು.

2012ರಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಘಟನೆಗೆ ಸಂಬಂಧಿಸಿ ಅಕ್ಷಯ್‌ ಹಾಗೂ ಇತರ ಮೂವರಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.

ಇತರ ಮೂವರು ಅಪರಾಧಿಗಳು ಈ ಹಿಂದೆಯೇ ತೀರ್ಪಿನ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದರು. ಅದನ್ನು 2018ರ ಜುಲೈ 19ರಂದು ಕೋರ್ಟ್‌ ತಳ್ಳಿಹಾಕಿತ್ತು. ಆ ಮೂವರ ಜತೆಗೆ ಅಕ್ಷಯ್‌ ಕುಮಾರ್‌ ಅರ್ಜಿ ಸಲ್ಲಿಸಿರಲಿಲ್ಲ. ಈಗ ತನ್ನ ವಕೀಲ ಎ.ಪಿ. ಸಿಂಗ್‌ ಮೂಲಕ ಆತ ತೀರ್ಪಿನ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾನೆ. ರಾಮ್‌ ಸಿಂಗ್‌ ಎಂಬ ಇನ್ನೊಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ.

ಮರು ಪರಿಶೀಲನಾ ಅರ್ಜಿಯಲ್ಲಿ ಏನಿದೆ?

‘ಗಲ್ಲು ಶಿಕ್ಷೆಯಿಂದ ಅಪರಾಧಿಯನ್ನು ಕೊನೆಗೊಳಿಸಬಹುದೇ ವಿನಾ ಅಪರಾಧವನ್ನಲ್ಲ. ಆದ್ದರಿಂದ ನಮಗೆ ಮರಣದಂಡನೆ ವಿಧಿಸಿ ನೀಡಿದ್ದ ತೀರ್ಪನ್ನು ಮರು ಪರಿಶೀಲನೆ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿಅಕ್ಷಯ್‌ ಕುಮಾರ್‌ ಹೇಳಿದ್ದಾನೆ.

ಆತ ಹೇಳಿದ್ದು...

*ಅತ್ಯಾಚಾರ ಅಪರಾಧಿಗಳಿಗೆ ಗಲ್ಲುಶಿಕ್ಷೆ ನೀಡಬಾರದು. ಬದಲಿಗೆ ಅವರಲ್ಲಿ ಬದಲಾವಣೆ ತರಲು ಕ್ರಮಬದ್ಧವಾದ ಯೋಜನೆ ರೂಪಿಸಬೇಕು

*ಗಲ್ಲು ಶಿಕ್ಷೆ ನೀಡುವುದರಿಂದ ಇಂಥ ಅಪರಾಧಗಳನ್ನು ತಡೆಯಲು ಸಾಧ್ಯ ಎಂಬ ಬಗ್ಗೆ ಯಾವುದೇ ಪುರಾವೆಗಳಿಲ್ಲ

*ಮರಣ ದಂಡನೆ ನೀಡಿದರೆ ಅಪರಾಧಿಗೆ ಸುಧಾರಣೆಯ ಅವಕಾಶವನ್ನು ನಿರಾಕರಿಸಿದಂತಾಗುತ್ತದೆ

*‘ಬಡತನದ ಹಿನ್ನೆಲೆಯಿಂದ ಬಂದ ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಗುವ ಅಪಾಯ ಹೆಚ್ಚು ಇದೆ’ ಎಂಬ ನ್ಯಾಯಮೂರ್ತಿ ಪಿ.ಎನ್‌. ಭಗವತಿ ಅವರ ವಾದವನ್ನು ಉಲ್ಲೇಖಿಸಿ, ‘ನ್ಯಾಯ ವ್ಯವಸ್ಥೆಯು ಸ್ಥಿರ ಗುಣಮಟ್ಟ ಕಾಯ್ದುಕೊಳ್ಳುವುದಿಲ್ಲ ಎಂದಾದರೆ ಯಾರು ಬದುಕಬೇಕು, ಯಾರು ಸಾಯಬೇಕು ಎಂದು ನಿರ್ಧರಿಸುವ ಅಧಿಕಾರ ನ್ಯಾಯಾಂಗಕ್ಕೆ ಎಲ್ಲಿದೆ?

*ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಿ ಜೀವಿತಾವಧಿ ಕಡಿಮೆಯಾಗುತ್ತಲೇ ಇದೆ. ಹೀಗಿರುವಾರ ಮರಣದಂಡನೆ ನೀಡುವ ಅಗತ್ಯವೇನು?

*ಮನುಷ್ಯರು ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು ಎಂದು ವೇದ–ಪುರಾಣಗಳು ಉಲ್ಲೇಖಿಸುತ್ತವೆ. ಕಲಿಯುಗದಲ್ಲಿ ಜೀವಿತಾವಧಿ 50–60 ವರ್ಷಗಳಿಗೆ ಇಳಿದಿದೆ. ಈಗಲೂ ಮರಣದಂಡನೆ ಬೇಕೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.