ADVERTISEMENT

ಕೆಸಿಆರ್‌ ರ‍್ಯಾಲಿಗೆ ಆಹ್ವಾನ ಇರಲಿಲ್ಲ: ನಿತೀಶ್‌ ಕುಮಾರ್‌

ಪಿಟಿಐ
Published 19 ಜನವರಿ 2023, 23:04 IST
Last Updated 19 ಜನವರಿ 2023, 23:04 IST
ನಿತೀಶ್‌ ಕುಮಾರ್‌
ನಿತೀಶ್‌ ಕುಮಾರ್‌   

ಪಟ್ನಾ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್‌) ನೇತೃತ್ವದಲ್ಲಿ ಖಮ್ಮಮ್‌ನಲ್ಲಿ ನಡೆದ ವಿರೋಧ ಪಕ್ಷಗಳ ನಾಯಕರ ಸಮಾವೇಶಕ್ಕೆ ತಮಗೆ ಆಹ್ವಾನ ಇರಲಿಲ್ಲ. ಆಹ್ವಾನ ಇದ್ದರೂ ಪೂರ್ವನಿರ್ಧರಿತ ಕಾರ್ಯಕ್ರಮಗಳ ಕಾರಣದಿಂದಾಗಿ ಹೋಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಕೆಸಿಆರ್‌ ನೇತೃತ್ವದಲ್ಲಿ ನಡೆದ ಸಮಾವೇಶವು ಕಾಂಗ್ರೆಸ್‌–ಬಿಜೆಪಿಯೇತರ ರಂಗವೊಂದರ ರೂಪುಗೊಳ್ಳುವಿಕೆಯ ಆರಂಭಿಕ ಹೆಜ್ಜೆ ಎಂದು ಒಪ್ಪಿಕೊಳ್ಳಲು ನಿತೀಶ್‌ ನಿರಾಕರಿಸಿದರು.

ರಾಷ್ಟ್ರ ರಾಜಕಾರಣದ ಮಹತ್ವಾಕಾಂಕ್ಷೆಯಿಂದ ಕೆಸಿಆರ್‌ ಅವರು ತೆಲಂಗಾಣ ರಾಷ್ಟ್ರ ಸಮಿತಿಯನ್ನು ಭಾರತ ರಾಷ್ಟ್ರ ಸಮಿತಿ ಎಂದು ಬದಲಾಯಿಸಿದ್ದಾರೆ. ಈ ಪಕ್ಷದ ಜೊತೆಗೆ ಮೈತ್ರಿಯ ಬಾಗಿಲುಗಳು ತೆರೆದಿವೆ ಎಂದು ನಿತೀಶ್‌ ಹೇಳಿದ್ದಾರೆ.

ADVERTISEMENT

ನಿತೀಶ್‌ ಅವರು ಎನ್‌ಡಿಎ ತೊರೆದು ಆರ್‌ಜೆಡಿ, ಕಾಂಗ್ರೆಸ್‌ ಜೊತೆಗೂಡಿ ಸರ್ಕಾರ ರಚಿಸಿದ ಬಳಿಕ ಕೆಸಿಆರ್‌ ಅವರು ಬಿಹಾರಕ್ಕೆ ಭೇಟಿ ನೀಡಿದ್ದರು. ಆರ್‌ಜೆಡಿಯ ಲಾಲು ಪ್ರಸಾದ್ ಅವರನ್ನೂ ಕೆಸಿಆರ್ ಭೇಟಿಯಾಗಿದ್ದರು.

ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿರೋಧ ಪಕ್ಷಗಳೆಲ್ಲ ಒಟ್ಟಾಗಿ ‘ಮುಖ್ಯ ರಂಗ’ವೊಂದರನ್ನು ರಚಿಸಬೇಕು ಎಂಬ ತಮ್ಮ ಚಿಂತನೆಗೆ ಕೆಸಿಆರ್‌ ಅವರು ನಡೆಸಿರುವ ರ‍್ಯಾಲಿಯು ಅಡ್ಡಿಯಾಗಬಹುದು ಎಂಬುದನ್ನು ನಿತೀಶ್‌ ಅಲ್ಲಗಳೆದಿದ್ದಾರೆ.

*

ಸ್ವಂತಕ್ಕಾಗಿ ನನಗೆ ಏನೂ ಬೇಡ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಆದರೆ, ವಿರೋಧ ಪಕ್ಷಗಳೆಲ್ಲ ರಾಷ್ಟ್ರೀಯ ಹಿತಾಸಕ್ತಿಗಾಗಿ ಒಟ್ಟಾಗಬೇಕಿದೆ.
–ನಿತೀಶ್‌ ಕುಮಾರ್‌, ಬಿಹಾರ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.