ತೇಜಸ್ವಿ ಯಾದವ್, ಒಳಚಿತ್ರದಲ್ಲಿ ನಿತೀಶ್ ಕುಮಾರ್
"Nitish Kumar should retire": Tejashwi Yadav slams Bihar CM for talking during national anthem
ಪಟ್ನಾ(ಬಿಹಾರ): ರಾಷ್ಟ್ರಗೀತೆ ಹಾಡುವ ಸಮಯದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡುತ್ತಾ, ಸನ್ನೆ ಮಾಡುತ್ತಾ ಇದ್ದ ಘಟನೆಯನ್ನು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಶುಕ್ರವಾರ ಖಂಡಿಸಿದ್ದಾರೆ.
ಇದೊಂದು ನಾಚಿಕೆಗೇಡಿನ ಸಂಗತಿಯಾಗಿದೆ. ಒಬ್ಬ ಬಿಹಾರಿಯಾಗಿ ನಿತೀಶ್ ಈ ರೀತಿ ನಡೆದುಕೊಂಡಿರುವುದು ನಾವೂ ನಾಚಿಕೆಪಡುವಂತೆ ಮಾಡಿದೆ ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಯಾದವ್, ‘ಬಿಹಾರ ಸಿಎಂ ನಿತೀಶ್ ಕುಮಾರ್ ನಿನ್ನೆ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ. 'ಬಿಹಾರಿ ಆಗಿ ಅವರು ಮಾಡಿದ ಕೆಲಸದಿಂದ ನನಗೆ ನಾಚಿಕೆಯಾಗುತ್ತಿದೆ. ಮುಖ್ಯಮಂತ್ರಿ ರಾಜ್ಯದ ನಾಯಕರು, ನಿನ್ನೆಯ ಘಟನೆ ದುರದೃಷ್ಟಕರ’ಎಂದು ತೇಜಸ್ವಿ ಹೇಳಿದ್ದಾರೆ.
‘ಭಾರತೀಯ ರಾಜಕೀಯದ ಇತಿಹಾಸದಲ್ಲಿ ಮುಖ್ಯಮಂತ್ರಿಯೊಬ್ಬರು ರಾಷ್ಟ್ರಗೀತೆಯನ್ನು ಅಗೌರವಿಸಿದ ಮೊದಲ ಘಟನೆ ಇದು. ಬಿಹಾರ ಸಿಎಂ ನಿತೀಶ್ ಕುಮಾರ್ ರಾಷ್ಟ್ರದ ಜನರಲ್ಲಿ ಕ್ಷಮೆಯಾಚಿಸಬೇಕು. ಬಿಜೆಪಿ ನಾಯಕರು ನಾಟಕ ಮಾತ್ರ ಮಾಡುತ್ತಾರೆ. ಬಿಹಾರದ ಇಬ್ಬರು ಉಪಮುಖ್ಯಮಂತ್ರಿಗಳು ಎಲ್ಲಿದ್ದಾರೆ? ಬಿಹಾರ ಸಿಎಂ ನಿತೀಶ್ ಕುಮಾರ್ ನಿವೃತ್ತರಾಗಬೇಕು" ಎಂದು ಅವರು ಕಿಡಿಕಾರಿದ್ದಾರೆ.
ನಿತೀಶ್ ಕುಮಾರ್ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹೇಳಿದ್ದಾರೆ. ತಮ್ಮ ಮಿದುಳು ಕೆಲಸ ಮಾಡುತ್ತಿಲ್ಲವೆಂದಾದರೆ ನತೀಶ್, ಸಿಎಂ ಸ್ಥಾನಯನ್ನು ಮಗನಿಗೆ ಬಿಟ್ಟುಕೊಡಲಿ ಎಂದು ಸಲಹೆ ನೀಡಿದ್ದಾರೆ.
ನಿತೀಶ್ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಪ್ರಶ್ನೆ ಎತ್ತಿದ ಆರ್ಜೆಡಿ ಸಂಸದೆ ಮಿಸಾ ಭಾರತಿ, ಬಿಹಾರವು ಎಂತವರ ಕೈಯಲ್ಲಿದೆ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಯೋಚಿಸಬೇಕಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.