ADVERTISEMENT

ದೇಶ ತೊರೆದ ಸ್ವಾಮಿ ನಿತ್ಯಾನಂದ : ಗುಜರಾತ್ ಪೊಲೀಸ್

ಪಿಟಿಐ
Published 22 ನವೆಂಬರ್ 2019, 7:21 IST
Last Updated 22 ನವೆಂಬರ್ 2019, 7:21 IST
ನಿತ್ಯಾನಂದ ಸ್ವಾಮೀಜಿ
ನಿತ್ಯಾನಂದ ಸ್ವಾಮೀಜಿ   

ಅಹಮದಾಬಾದ್‌/ನವದೆಹಲಿ: ‘ಸ್ವಾಮಿ ನಿತ್ಯಾನಂದ ದೇಶ ತೊರೆದಿದ್ದಾನೆ. ಅಗತ್ಯ ಉಂಟಾದಲ್ಲಿ ಸೂಕ್ತ ಮಾರ್ಗದ ಮೂಲಕ ಆತನನ್ನು ವಶಕ್ಕೆ ಪಡೆಯಲು ಕೋರಲಾಗುವುದು’ ಎಂದು ಗುಜರಾತ್ ಪೊಲೀಸರು ಗುರುವಾರ ತಿಳಿಸಿದ್ದಾರೆ.

‘ಕರ್ನಾಟಕದಲ್ಲಿ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದಾಗಲೇ ಆತ ದೇಶ ತೊರೆದಿದ್ದಾನೆ. ಆತನನ್ನು ಇಲ್ಲಿ ಹುಡುಕುವುದು ಸಮಯ ವ್ಯರ್ಥ ಮಾಡಿದಂತೆ’ ಎಂದು ಅಹಮದಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಆರ್‌.ವಿ. ಅಸಾರಿ ಹೇಳಿದ್ದಾರೆ.

ಮಕ್ಕಳನ್ನು ಅಪಹರಿಸಿ ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡ ಆರೋಪದ ಮೇಲೆ ಬುಧವಾರವಷ್ಟೆ ಆತನ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಆತನ ಇಬ್ಬರು ಶಿಷ್ಯೆಯರನ್ನು ಸಹ ಇದೇ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು.

ADVERTISEMENT

ಪ್ರಾಂಶುಪಾಲರ ಬಂಧನ, ಬಿಡುಗಡೆ: ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಸ್ವಾಮಿ ನಿತ್ಯಾನಂದನ ಆಶ್ರಮಕ್ಕೆ ಶಾಲೆಯ ಜಾಗವನ್ನು ಗುತ್ತಿಗೆ ನೀಡಿದ ಸಂಬಂಧ, ದೆಹಲಿ ಪಬ್ಲಿಕ್‌ ಸ್ಕೂಲ್‌ನ ಪ್ರಾಂಶುಪಾಲ ಹಿತೇಶ್ ಪುರಿ ಎನ್ನುವವರನ್ನು ಗುಜರಾತ್ ಪೊಲೀಸರು ಗುರುವಾರ ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ.

ಅಹಮದಾಬಾದ್‌ನ ಮಣಿನಗರದಲ್ಲಿರುವ ದೆಹಲಿ ಪಬ್ಲಿಕ್‌ ಸ್ಕೂಲ್‌ನ (ಡಿಪಿಎಸ್‌) ಜಾಗವನ್ನು ಅನುಮತಿ ಇಲ್ಲದೆ ಆಶ್ರಮಕ್ಕೆ ನೀಡಲಾಗಿತ್ತು. ಈ ಕುರಿತು ತ್ವರಿತ ವಿಚಾರಣೆ ನಡೆಸುವಂತೆ ಗುಜರಾತ್ ಶಿಕ್ಷಣ ಇಲಾಖೆಗೆ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.