ADVERTISEMENT

ಕೇಂದ್ರ ಸರ್ಕಾರದ ಹಣಕಾಸು ನೀತಿಯಲ್ಲಿ ಹಸ್ತಕ್ಷೇ‍ಪ ಇಲ್ಲ: ಸುಪ್ರೀಂಕೋರ್ಟ್‌

ಪಿಟಿಐ
Published 23 ಮಾರ್ಚ್ 2021, 10:03 IST
Last Updated 23 ಮಾರ್ಚ್ 2021, 10:03 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ:ಕೋವಿಡ್‌ ಸಂಕಷ್ಟದಿಂದಾಗಿ ಸಾಲದ ಕಂತುಗಳ ಪಾವತಿಗೆ ನೀಡಿದ್ದ ಆರು ತಿಂಗಳ ವಿನಾಯಿತಿಯನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಈ ಸಂಬಂಧಹಲವು ವ್ಯಾಪಾರಿ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಅವರ ಪೀಠವು ಕೇಂದ್ರದ ಹಣಕಾಸು ನೀತಿಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿತು.

ಕಂತು ಪಾವತಿಗೆ ವಿನಾಯಿತಿ ನೀಡಿದ್ದ ಅವಧಿಯಲ್ಲಿ ಬ್ಯಾಂಕ್‌ಗಳು ಯಾವುದೇ ಸಾಲಗಾರರಿಗೆ ಚಕ್ರ ಬಡ್ಡಿಯನ್ನು ವಿಧಿಸಬಾರದು. ಒಂದು ವೇಳೆ ಚಕ್ರಬಡ್ಡಿ ವಿಧಿಸಿದ್ದರೆ ಅದನ್ನು ಮರು ಪಾವತಿ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.

ADVERTISEMENT

ಕಳೆದ ವರ್ಷ ಆಗಸ್ಟ್‌ 31ರವರೆಗೆ ಸಾಲದ ಕಂತುಗಳ ಪಾವತಿಗೆ ವಿನಾಯಿತಿಯನ್ನು ನೀಡಲಾಗಿತ್ತು. ಈ ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಆರ್‌ಬಿಐ ಹೇಳಿದೆ.

‘ಕೇಂದ್ರ ಸರ್ಕಾರ ಮತ್ತು ಆರ್‌ಬಿಐನ ಹಣಕಾಸು ನೀತಿ ಮತ್ತು ಸಾಂಕ್ರಾಮಿಕ ಪರಿಹಾರ ನೀತಿಗಳಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ನೀತಿಗಳಲ್ಲಿ ಏನಾದರೂ ದೋಷವಿದ್ದರೆ ಮಾತ್ರ ನ್ಯಾಯಾಲಯ ಹಸ್ತಕ್ಷೇಪ ಮಾಡಬಹುದು’ ಎಂದು ಪೀಠವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.