ADVERTISEMENT

ಮಹಾರಾಷ್ಟ್ರದಲ್ಲಿ ಬಂಧನ ಕೇಂದ್ರಗಳಿಲ್ಲ: ಮುಸ್ಲಿಂ ನಿಯೋಗಕ್ಕೆ ಉದ್ಧವ್ ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಡಿಸೆಂಬರ್ 2019, 6:44 IST
Last Updated 25 ಡಿಸೆಂಬರ್ 2019, 6:44 IST
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ   

ಮುಂಬೈ: ‘ಮಹಾರಾಷ್ಟ್ರದಲ್ಲಿ ಬಂಧನ ಕೇಂದ್ರಗಳು ಇಲ್ಲ. ರಾಜ್ಯದಲ್ಲಿರುವ ಮುಸ್ಲಿಂ ನಾಗರಿಕರು ತಮ್ಮ ಆಡತಳಿದ ಬಗ್ಗೆ ಹೆದರುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮನ್ನು ಭೇಟಿ ಮಾಡಿದ ಮುಸ್ಲಿಂ ಶಾಸಕರ ನಿಯೋಗಕ್ಕೆ ಸ್ಪಷ್ಟಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಷ್ಟ್ರೀಯ ಜನಸಂಖ್ಯಾ ನೋದಣಿಗೆ ಸಂಯೋಜಿಸುವ ಆತಂಕದಿಂದದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಉದ್ಧವ್ ಮಾತು ಮಹತ್ವ ಪಡೆದುಕೊಂಡಿದೆ.

ನಿಯೋಗದ ಭಾಗವಾಗಿದ್ದ ಎನ್‌ಸಿಪಿ ಶಾಸಕ ನವಾಬ್ ಮಲಿಕ್, ‘ರಾಜ್ಯದಲ್ಲಿ ಮುಸ್ಲಿಮರಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ’ ಎಂಬ ಮುಖ್ಯಮಂತ್ರಿ ಭರವಸೆಯನ್ನು ಪುನರುಚ್ಚರಿಸಿದ್ದರು.

ADVERTISEMENT

ನವಿ ಮುಂಬೈನ ಖರ್‌ಗಾರ್‌ ಪ್ರದೇಶದಲ್ಲಿರುವ ಬಂಧನ ಕೇಂದ್ರವನ್ನು ಡ್ರಗ್ ಪೆಡ್ಲಿಂಗ್ ಪ್ರಕರಣಗಳ ವಿದೇಶಿ ಆರೋಪಿಗಳನ್ನು ಇರಿಸಲು ಬಳಸಲಾಗುತ್ತಿದೆ. ಕೇವಲ 38 ಜನರನ್ನು ಇರಿಸುವ ಸಾಮರ್ಥ್ಯ ಆ ಕೇಂದ್ರಕ್ಕೆ ಇದೆ. ಸಂಬಂಧಿಸಿದ ದೇಶಗಳಿಗೆ ಗಡೀಪಾರು ಮಾಡುವವರೆಗೆ ಮಾತ್ರ ಅವರನ್ನು ಅಲ್ಲಿ ಇರಿಸಲಾಗುವುದು ಎಂದರು.

‘ಪೌರತ್ವ ಕಾಯ್ದೆಯ ಬಗ್ಗೆಯೂ ಜನರು ಹೆದರುವ ಅಗತ್ಯವಿಲ್ಲ. ನನ್ನ ಸರ್ಕಾರ ಯಾವುದೇ ಧರ್ಮ ಅಥವಾ ಸಮುದಾಯದ ಹಕ್ಕುಗಳನ್ನು ಮೊಟಕುಗೊಳಿಸುವುದಿಲ್ಲ. ರಾಜ್ಯದಲ್ಲಿ ಕೋಮು ಸೌಹಾರ್ದ ಕಾಪಾಡಲು ಎಲ್ಲರೂ ಗಮನ ನೀಡಬೇಕು’ ಎಂದು ಉದ್ಧವ್ ಮನವಿ ಮಾಡಿದ್ದಾಗಿ ಮಲಿಕ್ ಮಾಹಿತಿ ನೀಡಿದರು.

ಗೃಹ ಸಚಿವ ಏಕನಾಥ ಶಿಂಧೆ, ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ, ಡಿಜಿಪಿ ಸುಬೋಧ್ ಜೈಸ್ವಾಲ್, ಮುಂಬೈ ಪೊಲೀಸ್ ಕಮಿಷನರ್ ಸಂಜಯ್ ಬಾರ್ವೆ, ಶಿವಸೇನಾ ಶಾಸಕ ಅಬ್ದುಲ್ ಸತ್ತಾರೆ, ಕಾಂಗ್ರೆಸ್ ಶಾಸಕ ಅಮೀನ್ ಪಟೇಲ್ ಈ ಸಂದರ್ಭ ಉಪಸ್ಥಿತರಿದ್ದರು.

–––

ತ್ವರಿತ ಸುದ್ದಿ, ನಿಖರ ಮಾಹಿತಿಗೆwww.prajavani.netನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.