ನವದೆಹಲಿ: ಕೊರೊನಾ ವೈರಸ್ ಸೋಂಕಿತರಿಗೆ (ಕೋವಿಡ್–19) ವಿವೇಚನಾರಹಿತವಾಗಿ ಪ್ಲಾಸ್ಮಾ ಚಿಕಿತ್ಸೆ ಬಳಸಬಾರದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಪ್ಲಾಸ್ಮಾ ಚಿಕಿತ್ಸೆ ನೀಡಲು ರಾಜಕಾರಣಿಗಳು ಸೂಚಿಸುತ್ತಿರುವ ಮಧ್ಯೆಯೇ ಆರೋಗ್ಯ ಸಚಿವಾಲಯ ಈ ಎಚ್ಚರಿಕೆ ನೀಡಿದೆ.
ಕೊರೊನಾಗೆ ಪ್ರಾಯೋಗಿಕವಾಗಿ ಬಳಸುವ ಚಿಕಿತ್ಸಾ ವಿಧಾನಗಳಲ್ಲಿ ಪ್ಲಾಸ್ಮಾ ಕೂಡ ಒಂದು. ಆದರೆ ಚಿಕಿತ್ಸೆಗಾಗಿ ಅದನ್ನು ಬೆಂಬಲಿಸಲು ಸ್ಪಷ್ಟ ಪುರಾವಗೆಳಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
ಕೊರೊನಾ ಪ್ರಕರಣದಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಕಾರ್ಯಕ್ಷಮತೆ ಬಗ್ಗೆ ಐಸಿಎಂಆರ್ ಪ್ರಾಯೋಗಿಕ ಅಧ್ಯಯನ ನಡೆಸುತ್ತಿದೆ. ಇದು ಕೊನೆಗೊಳ್ಳುವವರೆಗೂ ಈ ವಿಧಾನವನ್ನು ಯಾರೂ ಅನುಸರಿಸಬಾರದು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದರೆ.
ಪ್ಲಾಸ್ಮಾ ಚಿಕಿತ್ಸೆಯಿಂದ ಕೆಲವು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಕೆಲವು ಎಎಪಿ ನಾಯಕರು ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಆ ಚಿಕಿತ್ಸಾ ವಿಧಾನ ಅನುಸರಿಸಲು ಬೆಂಬಲಿಸಿದ್ದರು. ಸೋಂಕಿನಿಂದ ಚೇತರಿಸಿಕೊಂಡವರು ಪ್ಲಾಸ್ಮಾ ದಾನಕ್ಕೆ ಮುಂದೆಬರಬೇಕು ಎಂದು ಕೇಜ್ರಿವಾಲ್ ಬಹಿರಂಗವಾಗಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.