ADVERTISEMENT

ಯಾವುದೇ ರಾಷ್ಟ್ರೀಯ ಪಕ್ಷ ನಮ್ಮ ಸಂಪರ್ಕದಲ್ಲಿಲ್ಲ: ಉಲ್ಟಾ ಹೊಡೆದ ಶಿಂಧೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 13:24 IST
Last Updated 24 ಜೂನ್ 2022, 13:24 IST
ಏಕನಾಥ್ ಶಿಂಧೆ: ಫೇಸ್‌ಬುಕ್ ಚಿತ್ರ
ಏಕನಾಥ್ ಶಿಂಧೆ: ಫೇಸ್‌ಬುಕ್ ಚಿತ್ರ   

ಗುವಾಹಟಿ: ಪ್ರಬಲ ರಾಷ್ಟ್ರೀಯ ಪಕ್ಷವೊಂದು ನಮ್ಮ ಶಾಸಕರ ಗುಂಪನ್ನು ಬೆಂಬಲಿಸುತ್ತಿದೆ ಎಂದು ಗುರುವಾರ ಹೇಳಿದ್ದ ಮಹಾರಾಷ್ಟ್ರದ ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಇಂದು ಮಾತು ಬದಲಿಸಿದ್ದಾರೆ. ಯಾವುದೇ ರಾಷ್ಟ್ರೀಯ ಪಕ್ಷ ನಮ್ಮ ಸಂಪರ್ಕದಲ್ಲಿಲ್ಲ ಎಂದಿದ್ದಾರೆ.

ನಿಮ್ಮ ಗುಂಪನ್ನು ಬಿಜೆಪಿ ಬೆಂಬಲಿಸುತ್ತಿದೆಯೇ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ‘ದೊಡ್ಡ ಶಕ್ತಿ ನಮ್ಮನ್ನು ಬೆಂಬಲಿಸುತ್ತಿದೆ ಎಂದು ನಾನು ಹೇಳಿದ್ದೆ. ನನ್ನ ಮಾತಿನ ಅರ್ಥ ದಿವಂಗತ ಬಾಳಾ ಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಎಂಬುದಾಗಿದೆ’ ಎನ್ನುವ ಮೂಲಕ ಉಲ್ಟಾ ಹೊಡೆದಿದ್ದಾರೆ. ಕೆಲವೇ ಸಮಯದಲ್ಲಿ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಕೊನೆಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಶಿವಸೇನಾಪಕ್ಷವು ನಿಮ್ಮ ವಿರುದ್ಧ ಕ್ರಮಕ್ಕೆ ವಿಧಾನಸಭೆ ಉಪ ಸಭಾಪತಿಯವರಿಗೆ ಮನವಿ ಸಲ್ಲಿಸಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿಂಧೆ, ‘ಶಿವಸೇನೆಯ 55 ಶಾಸಕರ ಪೈಕಿ 44 ಮಂದಿ ನಮ್ಮ ಜೊತೆ ಗುವಾಹಟಿಗೆ ಬಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಬಹುಮತ ಮತ್ತು ಸಂಖ್ಯೆಯೇ ಮುಖ್ಯ. ಹಾಗಾಗಿ, ನಮ್ಮ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಯಾರಿಗೂ ಇಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಗುರುವಾರ ಶಿಂಧೆ ಆಪ್ತರು ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ, ಶಿಂಧೆ ಬಂಡಾಯ ಶಾಸಕರನ್ನು ಉದ್ದೇಶಿಸಿ, ನಮಗೆ ಪ್ರಬಲ ರಾಷ್ಟ್ರೀಯ ಪಕ್ಷದ ಬೆಂಬಲವಿದೆ ಎಂದು ಹೇಳಿದ್ದರು. ಏನೇ ಆದರೂ ನಾವು ಗೆಲ್ಲುತ್ತೇವೆ ಎಂದೂ ಹೇಳಿದ್ದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.