ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ– ಕೊಲೆ ಖಂಡಿಸಿ ಕಿರಿಯ ವೈದ್ಯರ ಉಪವಾಸ ಸತ್ಯಾಗ್ರಹ–ಪಿಟಿಐ ಚಿತ್ರ
ಕೋಲ್ಕತ್ತ: ಆರ್.ಜಿ. ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್ ತಪ್ಪಿತಸ್ಥ ಎಂದು ನ್ಯಾಯಾಲಯ ಶನಿವಾರ ತೀರ್ಪು ಪ್ರಕಟಿಸಿದೆ.
ಈ ಬೆನ್ನಲ್ಲೆ ಸಂಜಯ್ ರಾಯ್ ಶಿಕ್ಷೆಯನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವ ಯೋಜನೆ ಇಲ್ಲ ಎಂದು ರಾಯ್ ಸಹೋದರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಿಯಾಲ್ದಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅನಿರ್ಬನ್ ದಾಸ್ ಅವರು ಸಂಜಯ್ ರಾಯ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಸೋಮವಾರ (ಜ.20) ಪ್ರಕಟಿಸಲಿದ್ದಾರೆ.
ಅವನಿಂದ ಯಾವುದೇ ಅಪರಾಧ ನಡೆದಿದ್ದರೆ, ಸರಿಯಾದ ಶಿಕ್ಷೆಯಾಗಬೇಕು. ಈ ತೀರ್ಪು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗುವುದಿಲ್ಲ ಎಂದರು. 2007ರಲ್ಲಿ ನನ್ನ ಮದುವೆಯಾದ ಬಳಿಕ ಆ ಕುಟುಂಬದೊಂದಿಗೆ ಯಾವುದೇ ಸಂಪರ್ಕವಿಲ್ಲ, ಸದ್ಯ ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಭವಾನಿಪುರ ಪ್ರದೇಶದಲ್ಲಿರುವ ತಮ್ಮ ನಿವಾಸದ ಎದುರು ಮಾಧ್ಯಮದವರಿಗೆ ಅವರು ಹೇಳಿದರು.
ಸಂಜಯ್ ರಾಯ್ ಬಾಲ್ಯದಲ್ಲಿ ಸಾಮಾನ್ಯ ಹುಡುಗನಂತೆ ಇದ್ದ. ಅವನು ಬೆಳೆದಂತೆ ಮದ್ಯಪಾನಕ್ಕೆ ದಾಸನಾದನು. ಅವನು ಯಾವುದೇ ಮಹಿಳೆಯೊಂದಿಗೂ ಅಸಭ್ಯವಾಗಿ ನಡೆದುಕೊಂಡ ಬಗ್ಗೆ ನಾನು ಎಂದಿಗೂ ಕೇಳಿಲ್ಲ. ಕಳೆದ ಕೆಲವು ವರ್ಷಗಳಿಂದ ನಾವು ಅವನ ಸಂಪರ್ಕದಲ್ಲಿ ಇರಲಿಲ್ಲ ಎಂದು ಮಾಹಿತಿ ನೀಡಿದರು.
ಸಂಭುನಾಥ್ ಪಂಡಿತ್ ಆಸ್ಪತ್ರೆ ರಸ್ತೆಯಲ್ಲಿ ವಾಸಿಸುತ್ತಿರುವ ಸಂಜಯ್ ರಾಯ್ ಅವರ ತಾಯಿ ಮಾಧ್ಯಮದೊಂದಿಗೆ ಮಾತನಾಡಲು ನಿರಾಕರಿಸಿದರು. ಈ ಬಗ್ಗೆ ನನಗೆ ಏನೂ ಹೇಳಲು ಇಲ್ಲ, ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ ಎಂದು ಮಾಧ್ಯಮದರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.