ADVERTISEMENT

ಬಿಜೆಪಿ–ಎಐಎಡಿಎಂಕೆ ನಡುವೆ ಸಮಸ್ಯೆ ಇಲ್ಲ –ಅಣ್ಣಾಮಲೈ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 15:53 IST
Last Updated 21 ಸೆಪ್ಟೆಂಬರ್ 2023, 15:53 IST
ಕೆ.ಅಣ್ಣಾಮಲೈ
ಕೆ.ಅಣ್ಣಾಮಲೈ   

ಚೆನ್ನೈ: ‘ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳ ನಡುವೆ ಯಾವುದೇ ಸಮಸ್ಯೆ ಇಲ್ಲ. 2024ರಲ್ಲಿಯೂ ನರೇಂದ್ರ ಮೋದಿ ಅವರೇ ಪ್ರಧಾನಿ ಸ್ಥಾನದ ಅಭ್ಯರ್ಥಿ ಎಂಬುದು ಉಭಯ ಪಕ್ಷಗಳ ಸಾಮಾನ್ಯ ಚಿಂತನೆಯಾಗಿದೆ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.

‘ಸಮಸ್ಯೆ ಇದೆ ಎಂದು ನನಗನ್ನಿಸುವುದಿಲ್ಲ. ಮೋದಿ ಹೆಸರು ಎರಡು ಪಕ್ಷಗಳನ್ನು ಒಗ್ಗೂಡಿಸಿದೆ. ಆದರೆ, ಎರಡೂ ಪಕ್ಷಗಳ ಸಿದ್ಧಾಂತ ಭಿನ್ನವಾಗಿರುವ ಕಾರಣ ತಿಕ್ಕಾಟ ಸಹಜವಾದುದು’ ಎಂದು ಅಣ್ಣಾಮಲೈ ಮಂಗಳವಾರ ಪ್ರತಿಪಾದಿಸಿದರು.

‘ದೆಹಲಿಗೆ ಮೋದಿ, ತಮಿಳುನಾಡಿಗೆ ಎಡಪ್ಪಾಡಿ ಕೆ.ಪಳನಿಸ್ವಾಮಿ’ ಎಂಬ ಎಐಎಡಿಎಂಕೆ ಮುಖಂಡರ ಹೇಳಿಕೆಯನ್ನು ಉಲ್ಲೇಖಿಸಿ, ‘ಅದನ್ನು ನಾನು ಒಪ್ಪುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಬಲಪಡಿಸಿ, ಅಧಿಕಾರಕ್ಕೆ ತರುವ ಗುರಿಯೊಂದಿಗೆ ನಾನು ಬಂದಿದ್ದೇನೆ’ ಎಂದರು.

ADVERTISEMENT

‘ನಾನು ಹಾಗೇ ಹೇಳುವುದು ಹೇಗೆ ಸಾಧ್ಯ. ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ. ನಾನು ವೃತ್ತಿನಿರತ ರಾಜಕಾರಣಿಯಲ್ಲ. ನನ್ನನ್ನು ಅಧ್ಯಕ್ಷನಾಗಿ ನೇಮಿಸುವಾಗ ಪಕ್ಷಕ್ಕೂ ಇದು ಗೊತ್ತಿತ್ತು. ಇನ್ನೊಂದು ಪಕ್ಷದ ಪ್ರಚಾರಕ್ಕೆ ನಾನಿಲ್ಲ’ ಎಂದು ಸ್ಪಷ್ಟಪಡಿಸಿದರು. 

2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳುವ ಯಾವುದೇ ಪಕ್ಷವು ಬಿಜೆಪಿಯ ಮೈತ್ರಿ ಪಕ್ಷವಾಗಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.