ಕಾನ್ಪುರ: ‘ಚೌಬೆಪುರ ಠಾಣೆಯ, ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಹಾಗೂ ಹತ್ಯೆಯ ಆರೋಪಿ ವಿಕಾಸ್ ದುಬೆ ಮಧ್ಯೆ ಸಂಬಂಧವಿದೆ ಎಂದು ಘಟನೆಯಲ್ಲಿ ಸಾವಿಗೀಡಾಗಿರುವ ಡಿಎಸ್ಪಿ ದೇವೇಂದ್ರ ಮಿಶ್ರಾ ಅವರು ಮೊದಲೇ ಬರೆದಿದ್ದರು ಎನ್ನಲಾದ ಪತ್ರದ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಠಾಣಾಧಿಕಾರಿ ವಿನಯ್ ತಿವಾರಿ ಅವರು ದುಬೆ ಜತೆಗೆ ಸಂಬಂಧ ಹೊಂದಿದ್ದರು ಎಂಬ ಅರ್ಥದ ವಿವರಣೆ ಇರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಅದರಲ್ಲಿ ದಿನಾಂಕವಾಗಲಿ, ಕ್ರಮಸಂಖ್ಯೆಯಾಗಲಿ ಇಲ್ಲ. ಕಾನ್ಪುರದಲ್ಲಿ ಈಚೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಎಂಟು ಪೊಲೀಸರಲ್ಲಿ ಡಿಎಸ್ಪಿ ದೇವೇಂದ್ರ ಮಿಶ್ರಾ ಅವರೂ ಒಬ್ಬರು.
‘ಎಲ್ಲಾ ದಾಖಲೆಗಳನ್ನೂ ನಾವು ಪರಿಶೀಲಿಸಿದ್ದೇವೆ. ನನ್ನ ಕಚೇರಿಯಲ್ಲಿಯೇ ಕೆಲವು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅವುಗಳನ್ನು ಪರಿಶೀಲಿಸಲಾಗಿದೆ. ಆದರೆ, ತಿವಾರಿ ವಿರುದ್ಧ ಆರೋಪ ಮಾಡಿ ಮಿಶ್ರಾ ಅವರು ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ಯಾವುದೇ ದಾಖಲೆ ಲಭ್ಯವಾಗಿಲ್ಲ. ಆದರೂ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಎಸ್ಪಿ ದಿನೇಶ್ ಕುಮಾರ್ ಪ್ರಭು ಹೇಳಿದ್ದಾರೆ.
ದುಬೆಯನ್ನು ಬಂಧಿಸಲು ಪೊಲೀಸರ ತಂಡವೊಂದು ಬರುತ್ತಿರುವುದರ ಬಗ್ಗೆ ತಿವಾರಿಯು ಆರೋಪಿಗೆ ಮೊದಲೇ ಸೂಚನೆ ನೀಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.